ಕಾಸರಗೋಡು: ಜನಪ್ರಿಯ ಸೋಶಿಯಲ್ ಮಿಡಿಯಾ ಇನ್ಫ್ಲ್ಯುವೆಂಜರ್, ಮುಳ್ಳೇರಿಯ ಸನಿಹದ ಆದೂರು ನಿವಾಸಿ, ಚಿನ್ನು ಪಾಪು ಎಂದೇ ಪರಿಚಿತರಾಗಿರುವ ರೇಶ್ಮಾ ಆತ್ಮಹತ್ಯೆಗೆ ಸಂಬಂಧಿಸಿ ಪೊಲೀಸರು ತನಿಖೆ ಚುರುಕುಗೊಳಿಸಿರುವ ಮಧ್ಯೆ ಈಕೆಯ ಸ್ನೇಹಿತ ಕೂಡ್ಲು ಚೌಕಿ ನಿವಾಸಿ, ನಾರಾಯಣ್ ನಾಯ್ಕ್-ಸರೋಜ ದಂಪತಿ ಪುತ್ರ ಸಂದೇಶ್(29)ಅವರ ಮೃತದೇಹ ಮನೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಮೃತದೇಹ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು.
ರೇಶ್ಮಾ ಮೃತದೇಹ ಫೆ. 9ರಂದು ರೇಷ್ಮಾ ಮೃತದೇಹ ಉಳಿಯತ್ತಡ್ಕ ಸನಿಹದ ಆಝಾದ್ ನಗರದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸರು, ಈಕೆಯ ಸ್ನೇಹಿತ ಸಂದೇಶ್ನನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿರುವ ಮಧ್ಯೆ ಈತನೂ ನೇಣಿಗೆ ಶರಣಾಗಿರುವುದು ಮತ್ತಷ್ಟು ನಿಗೂಢತೆಗೆ ಕಾರಣವಾಗಿದೆ.
ರೇಶ್ಮಾ ಅವರ ತಂದೆ ಆದೂರು ಆಲಂತಡ್ಕ ನಿವಾಸಿ ಗಂಗಾಧರ್ ಹಾಗೂ ಸಹೋದರ ರತೀಶ್ ಅವರು ರೇಶ್ಮಾ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದರು. ಸಂದೇಶ್ ಜತೆಗಿನ ವೈಮನಸ್ಯ ರೇಶ್ಮಾ ಆತ್ಮಹತ್ಯೆಗೆ ಕಾರಣವೆಂಬ ದೂರು ಕೇಳಿಬಂದಿತ್ತು.
ಮುಖ್ಯವಾಗಿ ತುಳು, ಕನ್ನಡ, ಮಲಯಾಳ, ಕೊಂಕಣಿ ಸೇರಿದಂತೆ ಕಾಸರಗೋಡಿನ ವಿವಿಧ ಭಾಷೆಗಳಲ್ಲಿ ಅಡುಗೆ, ಪ್ರವಾಸ ವಿಡಿಯೋಗಳೊಂದಿಗೆ ಖ್ಯಾತಿ ಗಳಿಸಿದ್ದರು. ಐದು ವರ್ಷದ ಹಿಂದೆ ಪ್ರಜ್ವಲ್ ಎಂಬತನನ್ನು ರೇಶ್ಮಾ ಪ್ರೀತಿಸಿ ವಿವಾಹವಾಗಿದ್ದು, ಈ ಸಂಬಂಧದಲ್ಲಿ ನಾಲ್ಕು ವರ್ಷ ಪ್ರಾಯದ ಪುತ್ರನಿದ್ದಾನೆ. ನಂತರ ದಾಂಪತ್ಯದಲ್ಲಿ ವಿರಸ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ಇತ್ತೀಚೆಗೆ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಸಂದೇಶ್ ಎಂಬವರ ಜತೆ ಸ್ನೇಹದಲ್ಲಿದ್ದರು.
ಕಳೆದ ಕೆಲವು ದಿವಸಗಳಿಂದ ರೇಶ್ಮಾ ಒಂಟಿಯಾಗಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಲಕ್ಷಕ್ಕೂ ಹೆಚ್ಚುಮಂದಿ ಅನುಯಾಯಿಗಳನ್ನು ಹೊಂದಿರುವ ಇವರು, ಧಾರಾವಾಹಿಯಲ್ಲೂ ನಟಿಸಿದ್ದರು.


