ನವದೆಹಲಿ: ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನದಿಂದ ಬೃಹತ್ ಪ್ರಮಾಣದ ಉದ್ಯೋಗ ನಷ್ಟದ ಆತಂಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಳ್ಳಿಹಾಕಿದ್ದಾರೆ.
'ಈಗಾಗಲೇ ಅಸ್ತಿತ್ವದಲ್ಲಿರುವ ಉದ್ಯೋಗಗಳು ಎ.ಐ ತಂತ್ರಜ್ಞಾನದಿಂದ ಹೊಸ ರೂಪ ಪಡೆದುಕೊಳ್ಳಬಹುದು.
ಅದೇ ರೀತಿ, ಹೊಸ ಉದ್ಯೋಗಗಳ ಸೃಷ್ಟಿಗೂ ಕಾರಣವಾಗುತ್ತದೆ ಹಾಗೂ ದೇಶದ ಆರ್ಥಿಕತೆಯನ್ನು ಉತ್ತೇಜಿಸುತ್ತದೆ' ಎಂದು ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ವಿಶ್ವದ ಅಗ್ರ ಮೂರು ಎ.ಐ ಸೂಪರ್ಪವರ್ಗಳಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸುವುದು ತಮ್ಮ ಗುರಿ' ಎಂಬ ಮಾತನ್ನು ಪ್ರಧಾನಿ ಪುನರುಚ್ಚರಿಸಿದರು.
'ಭಾರತದ ಐ.ಟಿ ವಲಯವು ನಮ್ಮ ರಫ್ತಿನ ಬೆನ್ನೆಲುಬು ಆಗಿದ್ದು, ಆರ್ಥಿಕ ಬೆಳವಣಿಗೆಗೆ ಶಕ್ತಿ ತುಂಬಿದೆ. ಎ.ಐ ತಂತ್ರಜ್ಞಾನವು ಈ ವಲಯಕ್ಕೆ ಅತ್ಯುತ್ತಮ ಅವಕಾಶ ಮತ್ತು ಸವಾಲು ಎರಡನ್ನೂ ನೀಡಿದೆ' ಎಂದು ಹೇಳಿದರು.
'ವೈದ್ಯ ವೃತ್ತಿಗೆ ತೊಂದರೆ ಇಲ್ಲ': 'ಎ.ಐ ತಂತ್ರಜ್ಞಾನವು ವೈದ್ಯರು ಮತ್ತು ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡವರ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ತಂತ್ರಜ್ಞಾನದಿಂದ ವೈದ್ಯರು ಕೆಲಸ ಕಳೆದುಕೊಳ್ಳಬಹುದು ಎಂಬ ಭಯ ಅನಗತ್ಯ' ಎಂದು ಆರೋಗ್ಯ ಖಾತೆಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಹೇಳಿದರು.
ಎ.ಐ ಶೃಂಗದಲ್ಲಿ ಮಂಗಳವಾರ ನಡೆದ ಗೋಷ್ಠಿಯಲ್ಲಿ ಮಾತನಾಡಿ, 'ವೈದ್ಯಕೀಯ ಕ್ಷೇತ್ರಕ್ಕೆ ಎ.ಐ ನಿಂದ ಆಗುವ ಲಾಭಗಳ ಬಗ್ಗೆ ಮನಗಂಡಿರುವ ವೈದ್ಯರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅದರ ಜತೆಯಲ್ಲೇ, ಈ ತಂತ್ರಜ್ಞಾನವು ವೈದ್ಯ ವೃತ್ತಿಗೆ ಬೆದರಿಕೆಯಾಗಿ ಪರಿಣಮಿಸಬಹುದು ಎಂಬ ಆತಂಕವೂ ಕೆಲವರನ್ನು ಕಾಡುತ್ತಿದೆ. ಆ ರೀತಿ ಭಯಪಡುವುದರಲ್ಲಿ ಯಾವುದೇ ಅರ್ಥವಿಲ್ಲ' ಎಂದರು.
'ಎ.ಐ ತಂತ್ರಜ್ಞಾನವು ವೈದ್ಯರಿಗೆ ನೆರವಾಗಲು ಇರುವುದೇ ಹೊರತು, ಅವರನ್ನು ವೃತ್ತಿಯನ್ನು ಕಸಿದುಕೊಳ್ಳಲು ಇರುವುದಲ್ಲ' ಎಂದು ಪ್ರತಿಪಾದಿಸಿದರು.

