ಕಾಸರಗೋಡು: ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಖಾಸರಗೋಡು-ಕಾಞಂಗಾಡು ಕೆಎಸ್ಟಿಪಿ ರಸ್ತೆಯ ಶೋಚನೀಯಾವಸ್ಥೆ ಪರಿಹರಿಸುವಂತೆ ಆಗ್ರಹಿಸಿ ಯುವ ಕಾಂಗ್ರಸ್ ಕಾಸರಗೋಡು ಮಂಡಲ ಸಮಿತಿ ವತಿಯಿಂದ ಲೋಕೋಪಯೋಗಿ ಇಲಾಖೆಯ ಪಿಲಿಕುಂಜೆಯಲ್ಲಿರುವ ಕಚೇರಿ ದಿಗ್ಬಂಧನ ನಡೆಸಲಾಯಿತು.
ರಸ್ತೆ ಅಲ್ಲಲ್ಲಿ ಹೊಂಡಗಳುಂಟಾಗಿದ್ದು, ಇವುಗಳನ್ನು ದುರಸ್ತಿಗೊಳಿಸುವ ನೆಪದಲ್ಲಿ ವ್ಯಾಪಕವಾಗಿ ಕಾಂಕ್ರೀಟ್ ಮಿಶ್ರಿತ ಜಲ್ಲಿ ಸುರಿಯಲಾಗಿದ್ದು, ಇದರಿಂದ ಮತ್ತಷ್ಟು ಸಮಸ್ಯೆ ಎದುರಾಗಿದೆ. ದ್ವಿಚಕ್ರ ವಾಹನ ಸವಾರರ ಪಾಲಗಂತೂ ಈ ಹಾದಿ ಮರಣಗುಂಡಿಗಳಾಗುತ್ತಿದೆ. ರಸ್ತೆಹೊಂಡ ಮುಚ್ಚಲು ಸುರಿಯಲಾಗಿರುವ ಕಾಂಕ್ರೀಟ್ ಮಿಶ್ರಣ ಸೂಕ್ತ ರೀತಿಯಲ್ಲಿ ಅಳವಡಿಸಿ, ಡಾಂಬರೀಕರಣ ನಡೆಸುವಂತೆ ಆಗ್ರಹಿಸಿ ಪ್ರತಿಭಟನೆ ಹಾಗೂ ಅಧಿಕಾರಿಗಳಿಗೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಚೇರಿಯೊಳಗೆ ಪ್ರವೇಶಿಸಿದ ಪ್ರತಿಭಟನಾಕಾರರು ಅಧಿಕಾರಿಗಳಿಗೆ ತಡೆಯೊಡ್ಡಿ, ಘೋಷಣೆ ಮೊಳಗಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪ್ರತಿಭಟನಾಕರರನ್ನು ಅಲ್ಲಿಂದ ಚದುರಿಸಿದರು.
ಯುವಕಾಂಗ್ರೆಸ್ ಮುಖಂಡರಾದ ಅಬ್ದುಲ್ಲ ಎಡಚ್ಚೇರಿ, ಸಾಹಿದ್ ಪಿಲಿಕುಂಜೆ, ಮನಾಫ್ ಮಧೂರುಸಜೀರ್, ಸಲಾಂ, ನರಸಿಂಹ ಉಪಸ್ಥಿತರಿದ್ದರು.

