ʼಸೇವ್ ಇಂಡಿಯಾ ಫೌಂಡೇಶನ್ʼ ಎಂಬ ಸರಕಾರೇತರ ಸಂಸ್ಥೆಯು ಮಸೀದಿಗಳು, ದರ್ಗಾ ಮತ್ತು ವಕ್ಫ್ಗೆ ಸೇರಿದ ಆಸ್ತಿಗಳ ಅತಿಕ್ರಮಣವನ್ನು ಆರೋಪಿಸಿ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಈ ವಿಷಯಗಳ ಬಗ್ಗೆ ಹೇಳಿಕೆ ನೀಡುತ್ತಿರುವುದರ ಬಗ್ಗೆ ದಿಲ್ಲಿ ಹೈಕೋರ್ಟ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆ.
ದಿಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠವು, ಮೊದಲು PIL ಸಲ್ಲಿಸುವ ಮತ್ತು ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಅದರ ಬಗ್ಗೆ ಹೇಳಿಕೆ ನೀಡುವ ಪ್ರವೃತ್ತಿಯನ್ನು ಗುರುತಿಸಿದೆ. "ನೀವು ಈಗಾಗಲೇ ನ್ಯಾಯಾಲಯದ ಮುಂದೆ ಇದ್ದೀರಿ. ಹೇಳಬೇಕಾದ ಎಲ್ಲಾ ವಾದಗಳನ್ನು ನ್ಯಾಯಾಲಯದಲ್ಲೇ ಮಂಡಿಸಿ" ಎಂದು ಮೌಖಿಕವಾಗಿ ತಿಳಿಸಿದೆ.
ಪೀಠವು, ಸೇವ್ ಇಂಡಿಯಾ ಫೌಂಡೇಶನ್ ಸೇರಿದಂತೆ ಇತರ ಸಂಸ್ಥೆಗಳ ವಿರುದ್ಧ ಸಲ್ಲಿಸಿದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ. ಅರ್ಜಿಯಲ್ಲಿ ಈ ಸಂಸ್ಥೆಗಳು ರಾಜಕೀಯ ಉದ್ದೇಶಗಳಿಂದ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪಿಐಎಲ್ಗಳನ್ನು ಸಲ್ಲಿಸುತ್ತಿದ್ದು, ಸಮಾಜದಲ್ಲಿ ಧಾರ್ಮಿಕ ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಲಾಗಿತ್ತು.

