ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಬ್ಬ ಕಡಲ್ ಪ್ರದೇಶದಲ್ಲಿರುವ ರಘುನಾಥ ಮಂದಿರದಲ್ಲಿ ಗುರುವಾರ ಜೀವ ಕಳೆ ಬಂದಿತ್ತು.
36 ವರ್ಷಗಳ ನಂತರ ಶತಮಾನಗಳಷ್ಟು ಹಳೆಯದಾದ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ಹಿಂದೂ ಮುಸ್ಲಿಂರು ಸೇರಿ ರಾಮ ನವಮಿ ಪೂಜೆ ನೆರೆವೇರಿಸಿದ್ದಾರೆ. ಜೀರ್ಣೋದ್ಧಾರ ಕಾರ್ಯಗಳು ಇನ್ನೂ ನಡೆಯುತ್ತಿದ್ದರೂ ದೇವಾಲಯದ ಆಡಳಿತ ಸಮಿತಿಯು ರಾಮನವಮಿ ನಿಮಿತ್ತ ಪೂಜೆಯನ್ನು ಆಯೋಜಿಸಿತು.
36 ವರ್ಷಗಳ ನಂತರ ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ರಾಮನವಮಿ ಪೂಜೆಯನ್ನು ನಡೆಸಲಾಗುತ್ತಿದೆ. ನಮ್ಮಲ್ಲಿ ಕೆಲವರು ಜಮ್ಮುವಿನಿಂದ ಬಂದಿದ್ದೇವೆ, ಆದರೆ ದೇಶ ಮತ್ತು ವಿದೇಶಗಳಲ್ಲಿ ಅನೇಕರು ದೇಣಿಗೆ ನೀಡುವ ಮೂಲಕ ಜೀರ್ಣೋದ್ಧಾರ ಕಾರ್ಯಗಳನ್ನು ಬೆಂಬಲಿಸಿದ್ದಾರೆ ಎಂದು ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಹೇಳಿದ್ದಾರೆ.
ಇನ್ನೂ ಜೀರ್ಣೋದ್ಧಾರ ಕೆಲಸ ನಡೆಯುತ್ತಿರುವುದರಿಂದ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.

