ನವದೆಹಲಿ: 'ಭಾರತದ ಬಂದರುಗಳಲ್ಲಿ ತನ್ನ ಮೂರು ನೌಕೆಗಳನ್ನು ನಿಲ್ಲಿಸಲು ಇರಾನ್ ಅನುಮತಿ ಕೋರಿತ್ತು. ಮರುದಿನವೇ ಭಾರತ ಅನುಮೋದನೆ ನೀಡಿದೆ' ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸೋಮವಾರ ಹೇಳಿದ್ದಾರೆ.
'ಐಆರ್ಐಎಸ್ ಲವನ್' ಹೆಸರಿನ ಇರಾನ್ನ ನೌಕೆ ಮಾರ್ಚ್ 4ರಂದಲೂ ಕೊಚ್ಚಿ ಬಂದರಿನಲ್ಲಿ ಲಂಗರು ಹಾಕಿದೆ' ಎಂದು ಸೋಮವಾರ ಸಂಸತ್ತಿಗೆ ತಿಳಿಸಿದ್ದಾರೆ.
ಭಾರತದ ಬಂದರುಗಳಲ್ಲಿ ತನ್ನ ನೌಕೆಗಳನ್ನು ನಿಲ್ಲಿಸಲು ಇರಾನ್ ವಿನಂತಿಸಿದ್ದ ವಿಚಾರವನ್ನು ಸರ್ಕಾರದ ಹಿರಿಯ ಸಚಿವರೊಬ್ಬರು ಖಚಿತಪಡಿಸಿರುವುದು ಇದೇ ಮೊದಲು.
'ಭಾರತದ ಜಲ ಪ್ರದೇಶದಲ್ಲಿದ್ದ ತನ್ನ ಮೂರು ನೌಕೆಗಳನ್ನು ನಮ್ಮ ಬಂದರುಗಳಲ್ಲಿ ನಿಲ್ಲಿಸಲು ಇರಾನ್ ಫೆಬ್ರುವರಿ 28ರಂದು ಅನುಮತಿ ಕೋರಿದೆ. ಮಾರ್ಚ್ 1ರಂದು ಅನುಮತಿ ನೀಡಲಾಗಿದೆ. 'ಐಆರ್ಐಎಸ್ ಲವನ್' ಹೆಸರಿನ ನೌಕೆ ಮಾರ್ಚ್ 4ರಿಂದ ಕೊಚ್ಚಿಯಲ್ಲಿ ನಿಂತಿದೆ. ಅದರಲ್ಲಿರುವ ಸಿಬ್ಬಂದಿ ಪ್ರಸ್ತುತ ಭಾರತೀಯ ನೌಕಾಪಡೆಯ ಸೌಲಭ್ಯಗಳಲ್ಲಿ ತಂಗಿದ್ದಾರೆ' ಎಂದು ಹೇಳಿದ್ದಾರೆ.
'ನೌಕೆಗಳ ನಿಲುಗಡೆಗೆ ಅನುಮತಿಸಿರುವುದು ಸರಿಯಾದ ನಿರ್ಧಾರ ಎಂದು ನಾವು ನಂಬುತ್ತೇವೆ. ಇರಾನ್ ವಿದೇಶಾಂಗ ಸಚಿವರು ಈ ಮಾನವೀಯ ಕಾರ್ಯಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ' ಎಂದಿದ್ದಾರೆ.
ಅಮೆರಿಕದ ಜಲಾಂತರ್ಗಾಮಿ ನೌಕೆಯು ಮಾರ್ಚ್ 4ರಂದು ಶ್ರೀಲಂಕಾ ಕರಾವಳಿಯಲ್ಲಿ ಇರಾನ್ನ ಯುದ್ಧನೌಕೆ 'ಐಆರ್ಐಎಸ್ ಡೆನಾ'ವನ್ನು ಮುಳುಗಿಸಿತ್ತು. ವಿಶಾಖಪಟ್ಟಣದಲ್ಲಿ ನಡೆದಿದ್ದ 'ಮಿಲನ್ 2026' ಹೆಸರಿನ ಸೇನಾ ಸಮರಾಭ್ಯಾಸ ಮುಗಿಸಿ ಹಿಂದಿರುಗುತ್ತಿದ್ದ ನೌಕೆಯ ಮೇಲೆ ನಡೆದ ದಾಳಿಯಲ್ಲಿ ಇರಾನ್ ನೌಕಾಪಡೆಯ 87 ಮಂದಿ ಮೃತಪಟ್ಟಿದ್ದಾರೆ.
ಈ ಬೆಳವಣಿಗೆಯಿಂದ ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಹಿಂದೂ ಮಹಾಸಾಗರ ಪ್ರದೇಶಕ್ಕೆ ವಿಸ್ತರಿಸುವ ಆತಂಕ ಎದುರಾಗಿತ್ತು.
ಇದೇ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದ ಇರಾನ್ನ ಇನ್ನೊಂದು ನೌಕೆ, 'ಐಆರ್ಐಎನ್ಎಸ್ ಬುಶೇರ್' ಪ್ರಸ್ತುತ ಶ್ರೀಲಂಕಾ ಬಂದರಿನಲ್ಲಿ ನಿಂತಿದೆ. ಎಂಜಿನ್ನಲ್ಲಿ ದೋಷ ಕಂಡುಬಂದಿರುವುದರಿಂದ ನೌಕೆಗೆ ಶ್ರೀಲಂಕಾ ಜಲ ಪ್ರದೇಶವನ್ನು ಪ್ರವೇಶಿಸಲು ಇರಾನ್ ಮಾಡಿದ್ದ ಮನವಿಗೆ ದ್ವೀಪರಾಷ್ಟ್ರವು ಸಕಾರಾತ್ಮಕವಾಗಿ ಸ್ಪಂದಿಸಿತ್ತು.

