ಚೆನ್ನೈ/ಹೈದರಾಬಾದ್: ತಮಿಳುನಾಡು ಹಾಗೂ ತೆಲಂಗಾಣ ವಿಧಾನಸಭೆಯಿಂದ ರಾಜ್ಯಸಭೆಗೆ ಮತ್ತೊಂದು ಅವಧಿಗೆ ಎಂಟು ಅಭ್ಯರ್ಥಿಗಳು ಸೋಮವಾರ ಸದಸ್ಯರಾಗಿದ್ದಾರೆ.
ಡಿಎಂಕೆ ಅಭ್ಯರ್ಥಿಗಳಾದ ತಿರುಚಿ ಶಿವ, ಜೆ.ಸಿ. ರವೀಂದ್ರನ್ (ಡಿಎಂಕೆ), ಎಂ. ತಂಬಿದೊರೈ (ಎಐಎಡಿಎಂಕೆ), ಕ್ರಿಸ್ಟೋಫರ್ ಮಣಿಕ್ಕಂ (ಕಾಂಗ್ರೆಸ್), ಅನ್ಬುಮಣಿ ರಾಮದಾಸ್ (ಪಿಎಂಕೆ), ಎಲ್.ಕೆ. ಸುದೇಶ್ ಅವರ ರಾಜ್ಯಸಭೆ ಸದಸ್ಯತ್ವಕ್ಕೆ ತಮಿಳುನಾಡಿನಿಂದ ಅವಿರೋಧ ವ್ಯಕ್ತವಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯಸಭಾ ಸ್ಥಾನಗಳಿಗೆ ಬೇರೆ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರಿಂದ ಅವರು ಚುನಾವಣೆ ಇಲ್ಲದೇ ಸದಸ್ಯತ್ವ ಪಡೆದಿದ್ದಾರೆ.
ಶಿವ, ತಂಬಿದೊರೈ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. 'ರೈಸಿಂಗ್ ಸನ್' ತಮಿಳು ವಾಹಿನಿಯ ಸಂಪಾದಕರಾಗಿರುವ ರವೀಂದ್ರನ್ ಅವರಿಗೆ ಡಿಎಂಕೆ ಅವಕಾಶ ಕೊಟ್ಟಿದೆ.
ರಾಜ್ಯಸಭೆಯಲ್ಲಿ ಡಿಎಂಕೆಯ ಬಲ 10 ಸ್ಥಾನದಿಂದ ಎಂಟಕ್ಕೆ ಇಳಿದಿದೆ. ಎಐಎಡಿಎಂಕೆಯ ಬಲ ಐದಕ್ಕೆ ಏರಿದೆ. ಕಾಂಗ್ರೆಸ್ ತಮಿಳುನಾಡಿನಿಂದ ತನ್ನ ಸ್ಥಾನವನ್ನು ಎರಡಕ್ಕೆ ಹೆಚ್ಚಿಸಿಕೊಂಡಿದೆ.
ಸಿಂಘ್ವಿ, ರೆಡ್ಡಿಗೆ ಅವಿರೋಧ:
ಕಾಂಗ್ರೆಸ್ ಅಭ್ಯರ್ಥಿಗಳಾದ ಅಭಿಷೇಕ್ ಮನು ಸಿಂಘ್ವಿ ಹಾಗೂ ವೆಂ. ನರೇಂದ್ರ ರೆಡ್ಡಿ ಅವರು ತೆಲಂಗಾಣ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರಾದರು.
ನಾಮಪತ್ರ ಹಿಂಪಡೆಯುವ ಅವಧಿ ಮುಕ್ತಾಯವಾಗುತ್ತಿದ್ದಂತೆ, ಚುನಾವಣಾ ಅಧಿಕಾರಿಯು ಅವರ ಸದಸ್ಯತ್ವ ಘೋಷಿಸಿದರು.
ಸಿಂಘ್ವಿ, ರೆಡ್ಡಿ ಅವರು ಮಾರ್ಚ್ 5ರಂದು ತಮ್ಮ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರೂ, ಪರಿಶೀಲನೆ ವೇಳೆ ಅದನ್ನು ತಿರಸ್ಕರಿಸಲಾಗಿತ್ತು.
ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾಗಿರುವ ಸಿಂಘ್ವಿ ಅವರು ತೆಲಂಗಾಣದಿಂದ ಒಂದೂವರೆ ವರ್ಷದ ಅವಧಿ ಪೂರೈಸಿದ ಬಳಿಕ ಮತ್ತೊಮ್ಮೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ರೇವಂತ ರೆಡ್ಡಿ ಅವರ ಸಲಹೆಗಾರರಾಗಿರುವ ನರೇಂದ್ರ ರೆಡ್ಡಿ ಅವರಿಗೂ ಕಾಂಗ್ರೆಸ್ ರಾಜ್ಯಸಭೆಗೆ ಪ್ರವೇಶಿಸುವ ಅವಕಾಶ ನೀಡಿದೆ. ನರೇಂದ್ರ ಅವರು ಕಾಂಗ್ರೆಸ್ ಸೇರುವುದಕ್ಕೂ ಮುನ್ನ ತೆಲಗು ದೇಶಂ ಪಕ್ಷದಲ್ಲಿ ಇದ್ದರು.

