ನಾಗ್ಪುರ: ಹದಿನೆಂಟು ಜನರು ಮೃತಪಟ್ಟ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಎಸ್ಬಿಎಲ್ ಎನರ್ಜಿ ಲಿಮಿಟೆಡ್ನ 9 ಮಂದಿ ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಎಸ್ಬಿಎಲ್ ಎನರ್ಜಿ ಲಿಮಿಟೆಡ್ನ 21 ಮಂದಿ ನಿರ್ದೇಶಕರು ಹಾಗೂ ಪಾಲುದಾರರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಇಲ್ಲಿನ ಕಲಮೇಶ್ವರ ಪೊಲೀಸರು ಹೇಳಿದ್ದಾರೆ.
ಇದುವರೆಗೆ ಕಂಪೆನಿಯ 9 ಮಂದಿ ನಿರ್ದೇಶಕರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲಿಯಂ ಹಾಗೂ ಸ್ಫೋಟಕ ಸುರಕ್ಷಾ ಸಂಸ್ಥೆ (ಪಿಇಎಸ್ಒ) ಹಾಗೂ ಭದ್ರತೆಗಿರುವ ರಕ್ಷಣಾ ಮಾಹಿತಿ ವ್ಯವಸ್ಥೆ (ಡಿಐಎಸ್ಎಸ್) ಯ ಪ್ರಾಥಮಿಕ ವರದಿ ಕಂಪೆನಿಯಲ್ಲಿನ ಸುರಕ್ಷಾ ಲೋಪಗಳ ಕುರಿತು ಗಮನ ಸೆಳೆದಿದೆ ಎಂದು ಪೊಲೀಸ್ ವರಿಷ್ಠ (ನಾಗಪುರ ಗ್ರಾಮೀಣ) ಡಾ. ಹರ್ಷ ಪೊದ್ದಾರ್ ಸೋಮವಾರ ತಿಳಿಸಿದ್ದಾರೆ.
ವರದಿಯ ಆಧಾರದಲ್ಲಿ ಕಾರ್ಯಪ್ರವೃತ್ತವಾದ ಪೊಲೀಸರು ಕಂಪೆನಿಯ ಅಧಿಕಾರಿಗಳಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಂಧಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ಇತರ ಆರೋಪಿಗಳನ್ನು ಬಂಧಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗಪುರದ ಕಾಟೋಲ್ ತೆಹ್ಸಿಲ್ನ ರಾಹುಲ್ಗಾಂವ್ನಲ್ಲಿರುವ ಎಸ್ಬಿಎಲ್ ಎನರ್ಜಿ ಲಿಮಿಟೆಡ್ನ ಡಿಟೋನೇಟರ್ ಪ್ಯಾಕಿಂಗ್ ಘಟಕದಲ್ಲಿ ರವಿವಾರ ಬೆಳಗ್ಗೆ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 18 ಕಾರ್ಮಿಕರು ಮೃತಪಟ್ಟಿದ್ದಾರೆ. 24 ಮಂದಿ ಗಂಭೀರ ಗಾಯಗೊಂಡಿದ್ದರು.

