ಗಾಜಿಯಾಬಾದ್: 'ನನ್ನ ಮಗ ಈಗ ಸುಖಮಯ ಸ್ಥಾನದಲ್ಲಿದ್ದಾನೆ. ಅವನು ತುಂಬಾ ಒಳ್ಳೆಯ ಮಗನಾಗಿದ್ದ. ಯಾರೂ ಅಳಬೇಡಿ....'
13 ವರ್ಷದಿಂದ ಕೋಮಾದಲ್ಲಿದ್ದು, ದಯಾಮರಣ ಪಡೆದು ಮಂಗಳವಾರ ಇಹಲೋಕ ತ್ಯಜಿಸಿದ ಗಾಜಿಯಾಬಾದ್ ನಿವಾಸಿ ಹರೀಶ್ ರಾಣಾ (31) ಅವರ ಅಂತ್ಯಕ್ರಿಯೆಗೆ ಬಂದಿದ್ದವರಿಗೆ ಅವರ ತಂದೆ ಅಶೋಕ್ ರಾಣಾ ಹೇಳಿದ ಮಾತಿದು.
ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ ವಿದ್ಯಾರ್ಥಿಯಾಗಿದ್ದ ಹರೀಶ್, 2013ರಲ್ಲಿ ನಾಲ್ಕನೇ ಮಹಡಿಯಿಂದ ಬಿದ್ದು ಕೋಮಾ ಸ್ಥಿತಿಗೆ ತಲುಪಿದ್ದರು. ಕೃತಕ ಜೀವರಕ್ಷಕ ಉಪಕರಣಗಳ ನೆರವಿನಿಂದ ಉಸಿರಾಡುತ್ತಿದ್ದ ಅವರಿಗೆ ಇದೇ ಮಾರ್ಚ್ 11ರಂದು ಸುಪ್ರೀಂ ಕೋರ್ಟ್ ದಯಾಮರಣ ಪಾಲಿಸಿತ್ತು. ಮಾರ್ಚ್ 14ರಂದು ಹರೀಶ್ ಅವರನ್ನು ಗಾಜಿಯಾಬಾದ್ ನಿವಾಸದಿಂದ ಏಮ್ಸ್ಗೆ ಕರೆದೊಯ್ದು, ದಯಾಮರಣ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು.ಮಂಗಳವಾರ(ಮಾ.24) ಅವರು ನಿಧನರಾಗಿದ್ದಾರೆ.
ರಾಣಾಗೆ ಭಾವುಕ ವಿದಾಯ:
ಹರೀಶ್ ಅವರ 13 ವರ್ಷಗಳ ಸುದೀರ್ಘ ವೈದ್ಯಕೀಯ ಹೋರಾಟವು ಇಂದು (ಬುಧವಾರ) ಬೆಳಿಗ್ಗೆ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕ್ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯೊಂದಿಗೆ ಶಾಂತಿಯುತವಾಗಿ ಅಂತ್ಯಗೊಂಡಿತು.
ಕುಟುಂಬ ಸದಸ್ಯರು, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರತಿನಿಧಿಗಳು, ರಾಣಾ ಕುಟುಂಬ ವಾಸಿಸುವ ಗಾಜಿಯಾಬಾದ್ನ ರಾಜ್ ಎಂಪೈರ್ ಸೊಸೈಟಿಯ ನಿವಾಸಿಗಳು, ವಿವಿಧ ಎನ್ಜಿಒಗಳು, ಏಮ್ಸ್ ಆಸ್ಪತ್ರೆ ಸಿಬ್ಬಂದಿ, ಸ್ನೇಹಿತರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಹರೀಶ್ ಅವರ ಚಿತೆಗೆ ಸಹೋದರ ಆಶಿಶ್, ಸಹೋದರಿ ಭಾವನಾ ಅಗ್ನಿಸ್ಪರ್ಶ ಮಾಡಿದ್ದಾರೆ.
ಅಂಗಾಂಗ ದಾನ?
'ಹರೀಶ್ ಅವರ ಕಣ್ಣುಗಳನ್ನು ದಾನ ಮಾಡಲು ಕುಟುಂಬವು ನಿರ್ಧರಿಸಿದೆ' ಎಂದು ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸಿಸ್ಟರ್ ಲವ್ಲಿ ಅವರು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕುಟುಂಬ ಸದಸ್ಯರು ಸಂಪರ್ಕಕ್ಕೆ ಸಿಗದ ಕಾರಣ, ಅವರ ಇತರ ಅಂಗಾಂಗಗಳನ್ನು ದಾನ ಮಾಡಲಾಗಿದೆಯೇ? ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

