ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ ) ಇತ್ತೀಚೆಗೆ 8ನೇ ತರಗತಿಗೆ ಪರಿಚಯಿಸಿದ್ದ ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕವನ್ನು ವಾಪಸ್ ಪಡೆದುಕೊಂಡು ಬಹಿರಂಗವಾಗಿ ಕ್ಷಮೆಯಾಚಿಸಿದೆ.
ಇತ್ತೀಚೆಗೆ ಈ ಪುಸ್ತಕದಲ್ಲಿ ಪರಿಚಯಿಸಿದ 'ನಮ್ಮ ಸಮಾಜದಲ್ಲಿ ನ್ಯಾಯಾಂಗದ ಪಾತ್ರ' ಎಂಬ ಅಧ್ಯಾಯನವು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗಿತ್ತು.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಎನ್ಸಿಇಆರ್ಟಿ ಕ್ಷಮೆಯಾಚಿಸಿದೆ.
'ಎಕ್ಸ್ಪ್ಲೋರಿಂಗ್ ಸೊಸೈಟಿ: ಇಂಡಿಯಾ ಅಂಡ್ ಬಿಯಾಂಡ್ (ಗ್ರೇಡ್ 8 - ಭಾಗ II) ಪುಸ್ತಕವನ್ನು ಹಿಂತೆಗೆದುಕೊಳ್ಳಲಾಗಿದೆ. ಈ ಪುಸ್ತಕ ಇನ್ನೂ ಲಭ್ಯವಿರುವುದಿಲ್ಲ. ಶೈಕ್ಷಣಿಕ ವಿಷಯದಲ್ಲಿ ನಿಖರತೆ, ಸೂಕ್ಷ್ಮತೆ ಮತ್ತು ಜವಾಬ್ದಾರಿಯುತ ಮಾನದಂಡಗಳನ್ನು ಕಾಯ್ದುಕೊಳ್ಳಲು ಎನ್ಸಿಇಆರ್ಟಿ ಬದ್ಧವಾಗಿದೆ' ಎಂದು ಹೇಳಿದೆ.
ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿನ ವಿವಿಧ ಹಂತಗಳ ಭ್ರಷ್ಟಾಚಾರ ಹಾಗೂ ಭಾರತದಲ್ಲಿನ ನ್ಯಾಯಾಲಯಗಳ ಮೇಲೆ ಪರಿಣಾಮ ಬೀರುವ ರಚನಾತ್ಮಕ ಸಮಸ್ಯೆಗಳ ಕುರಿತು ಉಲ್ಲೇಖಿಸಲಾಗಿತ್ತು. ಭ್ರಷ್ಟಾಚಾರವು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ವಿಳಂಬಗೊಳಿಸುತ್ತದೆ ಎಂದೂ ವಿವರಿಸಲಾಗಿತ್ತು. ಇದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

