ನವದೆಹಲಿ: ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ಇರಾನ್ ಸೇನೆ ದಾಳಿ ನಡೆಸಿರುವುದನ್ನು ಭಾರತ ಬುಧವಾರ ಖಂಡಿಸಿದೆ.
ಇಸ್ರೇಲ್ ಹಾಗೂ ಅಮೆರಿಕ ಪಡೆಗಳು, ಇರಾನ್ ವಿರುದ್ಧ ಫೆಬ್ರುವರಿ 28ರಂದು ಜಂಟಿಯಾಗಿ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಂಡಿದೆ.
ಥಾಯ್ಲೆಂಡ್ ಧ್ವಜ ಹೊಂದಿದ್ದ ಹಾಗೂ ಭಾರತಕ್ಕೆ ಸರಕು ಹೊತ್ತು ತರುತ್ತಿದ್ದ, 'ಮಯೂರಿ ನಾರಿ' ಹೆಸರಿನ ಹಡಗಿನ ಮೇಲೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ ಬುಧವಾರ ದಾಳಿ ಮಾಡಿದೆ. ಈ ವೇಳೆ, ಇಬ್ಬರು ಭಾರತೀಯ ನಾವಿಕರು ಮೃತಪಟ್ಟಿದ್ದು, ಮತ್ತೊಬ್ಬರಿಗಾಗಿ ಶೋಧ ನಡೆಯುತ್ತಿದೆ.
ದಾಳಿಯ ಹೊಣೆಯನ್ನು ಇರಾನ್ ಹೊತ್ತುಕೊಂಡಿದೆ.
ಥಾಯ್ ಕಂಪನಿಯಾದ 'ಪ್ರೀಷಿಯಸ್ ಶಿಪ್ಪಿಂಗ್ ಪಿಸಿಎಲ್' ಒಡೆತನದ ಈ ಹಡಗು ಯುಎಇಯ ಖಲೀಫಾ ಬಂದರಿನಿಂದ ಗುಜರಾತಿನ ಕಾಂಡ್ಲಾ ಬಂದರಿನೆಡೆಗೆ ಹೊರಟಿತ್ತು.
ಇದಲ್ಲದೆ, ಪರ್ಷಿಯನ್ ಕೊಲ್ಲಿಯಲ್ಲಿ ಮೂರು ಹಡಗುಗಳ ಮೇಲೆ ಬುಧವಾರ ದಾಳಿಯಾಗಿದೆ.
ಭಾರತದ ನಾವಿಕರು ಮೃತಪಟ್ಟಿರುವುದನ್ನು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಖಚಿತಪಡಿಸಿದ್ದಾರೆ.
'ಸಂಘರ್ಷದ ಆರಂಭಿಕ ಹಂತದಲ್ಲಿ ನಡೆದ ಇಂತಹ ಹಲವು ದಾಳಿಗಳ ಸಂದರ್ಭದಲ್ಲಿ ಭಾರತೀಯ ನಾಗರಿಕರೂ ಸೇರಿದಂತೆ ಸಾಕಷ್ಟು ಅಮೂಲ್ಯ ಜೀವಗಳು ಈಗಾಗಲೇ ಬಲಿಯಾಗಿವೆ. ದಾಳಿಯ ತೀವ್ರತೆಯು ಹೆಚ್ಚುತ್ತಿದ್ದು, ಮತ್ತಷ್ಟು ಮಾರಕವಾಗುವ ಸಾಧ್ಯತೆ ಇದೆ' ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುವ ಮೂಲಕ ಅಮಾಯಕ ಸಿಬ್ಬಂದಿಗೆ ಅಪಾಯವನ್ನುಂಟು ಮಾಡುವುದು, ಸಂಚಾರಕ್ಕೆ ತೊಡಕಾಗುವುದು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಅಡ್ಡಿಪಡಿಸುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
'ಭಾರತ ಮೂಲದ ವಲಸಿಗರ ಕಲ್ಯಾಣಕ್ಕೆ ಹೆಚ್ಚಿನ ಮಹತ್ವ ನೀಡುತ್ತೇವೆ' ಎಂದಿರುವ ಜೈಸ್ವಾಲ್, 'ಸಂಘರ್ಷದ ವೇಳೆ ಗಲ್ಫ್ ಸಹಕಾರ ಮಂಡಳಿ (ಜಿಸಿಸಿ) ಇರುವ ದೇಶಗಳಲ್ಲಿ ಗಾಯಗೊಂಡಿರುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸುರಕ್ಷತೆ ಖಾತ್ರಿಪಡಿಸಿಕೊಳ್ಳಲು ಆದ್ಯತೆ ನೀಡುತ್ತಿದ್ದೇವೆ. ಅಲ್ಲಿನ ಆಡಳಿತದೊಂದಿಗೆ ನಮ್ಮ ರಾಯಭಾರ ಕಚೇರಿಯು ನಿರಂತರವಾಗಿ ಸಂಪರ್ಕದಲ್ಲಿದೆ' ಎಂದು ತಿಳಿಸಿದ್ದಾರೆ.
ಜಿಸಿಸಿ ದೇಶಗಳಲ್ಲಿ ಸುಮಾರು 1 ಕೋಟಿ ಭಾರತೀಯರು ನೆಲೆಸಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಸಂಘರ್ಷ ಆರಂಭವಾದಾಗಿನಿಂದ ಪಶ್ಚಿಮ ಏಷ್ಯಾದ ವಿವಿಧ ರಾಷ್ಟ್ರಗಳಿಂದ ಸುಮಾರು 67,000 ಜನರು ಭಾರತಕ್ಕೆ ಮರಳಿದ್ದಾರೆ.

