ನ್ಯಾಯಾಲಯಕ್ಕೆ ವರದಿ ಮಾಡುವಂತಹ ಯಾವುದೇ ಹೊಸ ಪ್ರಗತಿಯಾಗಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ವಿಕ್ರಮಜಿತ್ ಬ್ಯಾನರ್ಜಿಯವರು ನ್ಯಾ.ವಿಕ್ರಮನಾಥ ನೇತೃತ್ವದ ಪೀಠಕ್ಕೆ ತಿಳಿಸಿದರು.
ನರ್ಸ್ ಕುಟುಂಬದ ಪರ ಹಿರಿಯ ವಕೀಲ ಆರ್.ಬಸಂತ್ ಮತ್ತು ವಕೀಲ ಸುಭಾಷಚಂದ್ರನ್ ಅವರು, ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶಗಳು ನಿಮಿಷಾರ ಜೀವವನ್ನುಳಿಸಲು ನೆರವಾಗಿವೆ ಎಂದು ಉಲ್ಲೇಖಿಸಿ ವಿಚಾರಣೆಯನ್ನು ಮುಂದೂಡುವಂತೆ ಕೋರಿದರು.
ಪ್ರಕರಣವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಪೀಠವು,ಭವಿಷ್ಯದಲ್ಲಿ ನಿಮಿಷಾಗೆ ಸಂಬಂಧಿಸಿದಂತೆ ಯಾವುದೇ ಹೊಸ ತಿರುವನ್ನು ಸೂಚಿಸಿ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಗಳನ್ನು ವಿಚಾರಣೆಗೆ ಪಟ್ಟಿ ಮಾಡಲಾಗುವುದು ಎಂದು ತಿಳಿಸಿತು.
ಶರಿಯಾ ಕಾನೂನಿನಡಿ ಅನುಮತಿಸಿರುವಂತೆ ಕ್ಷಮಾದಾನಕ್ಕೆ ಪ್ರತಿಯಾಗಿ 'ರಕ್ತದ ಹಣ (ಪರಿಹಾರ ಧನ)' ಪಾವತಿಸಲು ಮೃತವ್ಯಕ್ತಿಯ ಕುಟುಂಬ ಸದಸ್ಯರೊಂದಿಗೆ ಮಾತುಕತೆಗಳನ್ನು ಏರ್ಪಡಿಸಲು ಹೊಸ ಮಧ್ಯವರ್ತಿಯೋರ್ವರು ಮುಂದೆ ಬಂದಿದ್ದಾರೆ ಎಂದು ಕಳೆದ ವರ್ಷದ ಅಕ್ಟೋಬರ್ನಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ನಿಮಿಷಾಗೆ ಜು.16, 2025ರಂದು ನಿಗದಿಯಾಗಿದ್ದ ಮರಣದಂಡನೆ ಜಾರಿಯನ್ನು ಭಾರತ ಸರಕಾರದ ರಾಜತಾಂತ್ರಿಕ ಮಧ್ಯಪ್ರವೇಶಗಳು ಮತ್ತು ಕೇರಳದ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರ ಪ್ರಯತ್ನಗಳ ಬಳಿಕ ಮುಂದೂಡಲಾಗಿತ್ತು.
ತನ್ನ ಯೆಮೆನಿ ವ್ಯವಹಾರ ಪಾಲುದಾರನ ಹತ್ಯೆಗಾಗಿ 2020ರಲ್ಲಿ ಅಲ್ಲಿಯ ವಿಚಾರಣಾ ನ್ಯಾಯಾಲಯವು ಕೇರಳದ ಪಾಲಕ್ಕಾಡ್ ಜಿಲ್ಲೆ ಮೂಲದ ನಿಮಿಷಾಗೆ ಮರಣದಂಡನೆಯನ್ನು ವಿಧಿಸಿತ್ತು. ನಂತರ ಅವರು ಸಲ್ಲಿಸಿದ್ದ ಮೆಲ್ಮನವಿಗಳನ್ನು ಯೆಮೆನ್ನ ಮೇಲ್ಮನವಿ ನ್ಯಾಯಾಲಯಗಳು ವಜಾಗೊಳಿಸಿದ್ದವು.
ನಿಮಿಷಾರ ಏಕೈಕ ಮಗು,12ರ ಹರೆಯದ ಬಾಲಕಿ ಕಾನ್ವೆಂಟ್ನಲ್ಲಿ ವಾಸಿಸುತ್ತಿದ್ದಾಳೆ. ಅವರ ತಾಯಿ ಎರ್ನಾಕುಲಮ್ನಲ್ಲಿ ಮನೆಕೆಲಸದಾಳಾಗಿ ದುಡಿಯುತ್ತಿದ್ದು, ಪತಿ ರಿಕ್ಷಾ ಚಾಲಕರಾಗಿದ್ದಾರೆ ಎಂದು ಅವರ ಪರವಾಗಿ ಸಲ್ಲಿಸಿರುವ ಅರ್ಜಿಯೊಂದರಲ್ಲಿ ಹೇಳಲಾಗಿದೆ.

