ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬಳಿಕ, ಆ ಸ್ಥಾನಕ್ಕೆ ನೇಮಕಗೊಂಡಿರುವ ಅವರ ಪುತ್ರ ಮೊಜ್ತಬಾ ಖಮೇನಿ ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬ ಬಗ್ಗೆ ಹಲವು ಪ್ರಶ್ನೆಗಳು ಮೂಡಿವೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಫೆಬ್ರುವರಿ 28ರಂದು ನಡೆಸಿದ ಜಂಟಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವು ನಾಯಕರು ಹತ್ಯೆಯಾಗಿದ್ದರು.
ಆ ದಾಳಿ ವೇಳೆ ಮೊಜ್ತಬಾ ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದಕ್ಕೆ ಪುಷ್ಟಿ ನೀಡುವಂತೆ, ಯುದ್ಧ ಆರಂಭವಾದಾಗಿನಿಂದ ಮೊಜ್ತಬಾ ಒಮ್ಮೆಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ, ಅವರು ಬದುಕುಳಿದಿರುವ ಬಗ್ಗೆಯೇ ಸಂದೇಹಗಳು ಮೂಡಿವೆ.
ಇದೀಗ ಅವರು ಸಂಘರ್ಷದ ಕುರಿತು ಲಿಖಿತ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. 'ಇರಾನ್ ಮೇಲಿನ ಆಕ್ರಮಣಗಳ ವಿರುದ್ಧ ನಿಂತದ್ದಕ್ಕಾಗಿ ಮಿತ್ರ ರಾಷ್ಟ್ರ ಇರಾಕ್ಗೆ ಧನ್ಯವಾದ ಹೇಳಿದ್ದಾರೆ' ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಬದುಕಿರುವ ಬಗ್ಗೆ ಟ್ರಂಪ್ ಶಂಕೆ
'ಇರಾನ್ನ ನೂತನ ಸರ್ವೋಚ್ಚ ನಾಯಕನೂ ಹತ್ಯೆಯಾಗಿದ್ದಾರೆ. ಇಲ್ಲವೇ ಗಂಭೀರವಾಗಿ ಗಾಯಗೊಂಡಿದ್ದಾರೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗೆ ಹೇಳಿದ್ದರು.
ಇಸ್ರೇಲ್ ಜೊತೆಗೂಡಿ ನಡೆಸುತ್ತಿರುವ ಜಂಟಿ ದಾಳಿ ಬಗ್ಗೆ ಮಾತನಾಡಿದ್ದ ಅವರು, ಇರಾನ್ ಸೇನಾ ನಾಯಕತ್ವ ಹಾಗೂ ರಕ್ಷಣಾ ವ್ಯವಸ್ಥೆ ಸಂಪೂರ್ಣ ನಾಶವಾಗಿದೆ. ಅದಕ್ಕೆ ತಕ್ಕಂತೆ, ಮೊಜ್ತಬಾ ಅವರೂ ದೀರ್ಘ ಸಮಯದಿಂದ ಮೌನವಾಗಿ ಇರುವುದು ಅವರು ಬದುಕಿರುವ ಸಾಧ್ಯತೆ ಇಲ್ಲ ಎಂಬುದನ್ನೂ ಹೇಳುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದರು.
'ಅವರ (ಇರಾನ್) ಪರಮೋಚ್ಚ ನಾಯಕನ ಹತ್ಯೆಯಾಗಿದೆ. ಖಮೇನಿ ಪುತ್ರ ಮೊಜ್ತಬಾ ಕೂಡ ಮೃತಪಟ್ಟಿರಬಹುದು. ಇಲ್ಲವೇ ಗಂಭೀರವಾಗಿ ಗಾಯಗೊಂಡಿರಬಹುದು. ಏಕೆಂದರೆ, ಮೊಜ್ತಬಾ ಬಗ್ಗೆ ಯಾರಿಂದಲೂ ಮಾಹಿತಿ ಇಲ್ಲ. ನನ್ನ ಪ್ರಕಾರ, 'ಈ ಎಲ್ಲ ಬೆಳವಣಿಗೆಗಳಿಂದ ಹೊರಗಿರುತ್ತೇನೆ' ಎಂಬುದು ಮೊಜ್ತಬಾ ಅಭಿಪ್ರಾಯವಾಗಿರಬಹುದು' ಎಂದು ಟ್ರಂಪ್ ವ್ಯಂಗ್ಯವಾಗಿ ಹೇಳಿದ್ದರು.
ಸಂದೇಶ ವದಂತಿಗಳಿಗೆ ಸ್ಪಷ್ಟನೆಯೇ?
ಮೊಜ್ತಬಾ ಬದುಕುಳಿದಿರುವ ಬಗ್ಗೆ ಅನುಮಾನಗಳು ಮೂಡಿರುವ ಹೊತ್ತಲ್ಲಿ, ಹಂಚಿಕೆಯಾಗಿರುವ ಸಂದೇಶವು ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಅಲಿ ಖಮೇನಿ ಹತ್ಯೆ ಬಳಿಕ ಮಾರ್ಚ್ 9ರಂದು ಸರ್ವೋಚ್ಚ ನಾಯಕನಾಗಿರುವ ಮೊಜ್ತಬಾ, ದೇಶವನ್ನುದ್ದೇಶಿಸಿ, ಸಂಘರ್ಷದ ಕುರಿತು ಮಾರ್ಚ್ 12ರಂದು ಮೊದಲ ಸಂದೇಶ ಹಂಚಿಕೊಂಡಿದ್ದರು. ಅದಾದ ನಂತರ, ಮಾರ್ಚ್ 20ರಂದು ನೌರುಜ್ ಸಂದೇಶ ನೀಡಿದ್ದರು. ಲಿಖಿತ ರೂಪದಲ್ಲೇ ಬಿಡುಗಡೆಯಾಗಿದ್ದ ಆ ಸಂದೇಶಗಳನ್ನು, ರಾಷ್ಟ್ರೀಯ ಸುದ್ದಿ ವಾಹಿನಿಯ ನಿರೂಪಕರು ಓದಿದ್ದರು.
ಇದೀಗ ಕತಾರ್ಗೆ ಧನ್ಯವಾದ ಹೇಳಿದ ಸಂದೇಶವೂ ಲಿಖಿತ ರೂಪದಲ್ಲೇ ಬಿಡುಗಡೆಯಾಗಿದೆ.
ಈ ಸಂದೇಶಗಳ ಹೊರತಾಗಿಯೂ, ವಾಸ್ತವದಲ್ಲಿ ಮೊಜ್ತಬಾ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಇರಾನ್ನಿಂದ ಇದುವರೆಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಹಾಗಾಗಿ, ಅವರು ಎಲ್ಲಿದ್ದಾರೆ? ಹೇಗಿದ್ದಾರೆ? ಎಂಬ ಪ್ರಶ್ನೆಗಳು ಹಾಗೆಯೇ ಉಳಿದಿವೆ.
ಕಣ್ಮರೆ ಏಕೆ?
ಪಶ್ಚಿಮ ಏಷ್ಯಾದಲ್ಲಿ ಸೃಷ್ಟಿಯಾಗಿರುವ ಉದ್ವಿಗ್ನೆಯು ಎರಡನೇ ತಿಂಗಳಿಗೆ ಕಾಲಿಟ್ಟಿದೆ. ಮೊಜ್ತಬಾ ಕಣ್ಮರೆಯಾಗಿರುವುದರಿಂದ ಇರಾನ್ನ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಿರುವವರು ಯಾರು? ಅಥವಾ ತೆರೆಮರೆಯಲ್ಲಿದ್ದುಕೊಂಡೇ ಮೊಜ್ತಬಾ ನಿರ್ದೇಶನಗಳನ್ನು ನೀಡುತ್ತಿದ್ದಾರೆಯೇ ಎಂಬ ಬಗ್ಗೆ ಚರ್ಚೆಯಾಗುತ್ತಿದೆ.
ಇರಾನ್ ಪ್ರಮುಖ ನಾಯಕರ ಬಗ್ಗೆ ಸುಳಿವು ನೀಡಿದವರೆಗೆ ಬಹುಮಾನ ನೀಡುವುದಾಗಿ ಅಮೆರಿಕ ಇತ್ತೀಚೆಗೆ ಘೋಷಿಸಿತ್ತು. ನಂತರ, ಇರಾನ್ನ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ) ನೌಕಾಪಡೆ ಮುಖ್ಯಸ್ಥ ಅಲಿರೆಜಾ ತಂಕಸೀರಿ ಸೇರಿದಂತೆ ಹಲವು ನಾಯಕರನ್ನು ಹೊಡೆದುರುಳಿಸಿರುವುದಾಗಿ ಅಮೆರಿಕ, ಇಸ್ರೇಲ್ ಹೇಳಿಕೊಂಡಿವೆ.
ಇದೆಲ್ಲದರ ನಡುವೆ, ಮೊಜ್ತಬಾ ಗಂಭೀರವಾಗಿ ಗಾಯಗೊಂಡು, ಚೇತರಿಸಿಕೊಳ್ಳುತ್ತಿದ್ದಾರೆಯೇ? ಭದ್ರತಾ ಕಾರಣಕ್ಕಾಗಿ ಉದ್ದೇಶಪೂರ್ವಕವಾಗಿಯೇ ತಲೆ ಮರೆಸಿಕೊಂಡಿದ್ದಾರೆಯೇ? ಎಂಬುದು ಇನ್ನಷ್ಟೇ ಖಾತ್ರಿಯಾಗಬೇಕಿದೆ.

