ಗಾಂಧಿನಗರ: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರುವ ಕುರಿತು ಅಧ್ಯಯನ ನಡೆಸಲು ರಚಿಸಿರುವ ಸಮಿತಿಯು ತನ್ನ ಕರಡು ವರದಿಯನ್ನು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಮಂಗಳವಾರ ಹಸ್ತಾಂತರಿಸಿತು. ವರದಿಯು ಮೂರು ಸಂಪುಟಗಳನ್ನು ಒಳಗೊಂಡಿದೆ.
'ವಿವರವಾದ ಅಧ್ಯಯನ, ಹಲವು ಸ್ಥಳಗಳಿಗೆ ಭೇಟಿ ನೀಡಿರುವುದು, ಸಾರ್ವಜನಿಕರು ಹಾಗೂ ಸರ್ಕಾರಿ ಅಧಿಕಾರಿಗಳೊಂದಿಗಿನ ಚರ್ಚೆಯ ಆಧಾರದ ಮೇಲೆ ವರದಿಯನ್ನು ಸಿದ್ಧಪಡಿಸಲಾಗಿದೆ' ಎಂದು ಸಮಿತಿಯು ಹೇಳಿತು.
ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದ ಸಮಿತಿಯು ವರದಿಯನ್ನು ಸಿದ್ಧಪಡಿಸಿದೆ.
'ಮದುವೆ, ವಿಚ್ಛೇದನ, ಉತ್ತರಾಧಿಕಾರ ಹಾಗೂ ದತ್ತು ಸ್ವೀಕಾರದಂತಹ ವಿಷಯಗಳಲ್ಲಿ ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಸಾಮಾನ್ಯ ಅಥವಾ ಒಂದೇ ತೆರನಾದ ಕಾನೂನಿನ ಚೌಕಟ್ಟನ್ನು ವರದಿಯು ಪ್ರಸ್ತಾಪಿಸುತ್ತದೆ. ಮಹಿಳೆಯರ ಸಮಾನ ಹಕ್ಕುಗಳು ಹಾಗೂ ರಕ್ಷಣೆಗೆ ಆದ್ಯತೆ ನೀಡಲಾಗಿದೆ' ಎಂದು ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
'ರಾಜ್ಯದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ'ಯನ್ನು ಪರಿಗಣಿಸಿ ಸಲಹೆಗಳನ್ನು ನೀಡಲಾಗಿದೆ' ಎಂದೂ ಹೇಳಿದೆ. ಯುಸಿಸಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಉತ್ತರಾಖಂಡ.

