ನವದೆಹಲಿ: ಪಶ್ಚಿಮ ಬಂಗಾಳದ ಅಲಿಪುರ್ದೂರ್ ಜಿಲ್ಲೆಯಲ್ಲಿ 1,500ಕ್ಕಿಂತ ಕಡಿಮೆ ಮತದಾರರಿರುವ ಮೂರು ಮತಗಟ್ಟೆಗಳನ್ನು ತಲುಪಲು ಚುನಾವಣಾ ತಂಡಗಳು ಬುಕ್ಸಾ ಹುಲಿ ಮೀಸಲು ಪ್ರದೇಶದ ಬೆಟ್ಟಗಳ ಮೂಲಕ ಪಾದಯಾತ್ರೆ ಮಾಡಬೇಕಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ(ಸಿಇಸಿ) ಜ್ಞಾನೇಶ್ ಕುಮಾರ್ ಭಾನುವಾರ ತಿಳಿಸಿದ್ದಾರೆ.
4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯ ಘೋಷಣೆಗೆ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನಡೆಯಲಿರುವ ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಶಿಷ್ಟ ಮತಗಟ್ಟೆಗಳ ಬಗ್ಗೆ ಮಾಹಿತಿ ನೀಡಿದರು.
ಅಸ್ಸಾಂನ ಧನೇಖಾನಾ ಮತಗಟ್ಟೆಗೆ ತಲುಪಲು ಸಿಬ್ಬಂದಿಯ ಹರಸಾಹಸವನ್ನು ಅವರು ಉಲ್ಲೇಖಿಸಿದರು.ಅಸ್ಸಾಂನ ಮಜುಲಿಯಿಂದ ದೋಣಿ ಮತ್ತು ರಸ್ತೆಯ ಮೂಲಕ 50-60 ಕಿ.ಮೀ. ಪ್ರಯಾಸಕರ ಪ್ರಯಾಣವನ್ನು ಸಿಬ್ಬಂದಿ ಕೈಗೊಳ್ಳುತ್ತಾರೆ. ನಂತರ, ಬ್ರಹ್ಮಪುತ್ರ ನದಿಯನ್ನು ದಾಟಿ ಅಂತಿಮವಾಗಿ ಟ್ರ್ಯಾಕ್ಟರ್ ಮೂಲಕ 248 ಮತದಾರರಿರುವ ದೂರದ ಧನೇಖಾನಾ ಮತಗಟ್ಟೆಯನ್ನು ತಲುಪುತ್ತಾರೆ ಎಂದು ಸಿಇಸಿ ಹೇಳಿದರು.
ಕೇರಳದ ಎಡಮಲಕುಡಿಯ ಬುಡಕಟ್ಟು ಪ್ರದೇಶದಲ್ಲಿರುವ ಒಂದು ಮತಗಟ್ಟೆಯು ಒಟ್ಟು 693 ಮತದಾರರನ್ನು ಹೊಂದಿದ್ದು, ಇದೂ ಸಹ ಒಂದು ವಿಶಿಷ್ಟವಾದ ಮತಗಟ್ಟೆಯಾಗಿದೆ. ಚುನಾವಣಾ ಸಿಬ್ಬಂದಿ ವಿಶೇಷ ವಾಹನಗಳಲ್ಲಿ ಕಡಿದಾದ ರಸ್ತೆಗಳಲ್ಲಿ 30 ಕಿ.ಮೀ ಪ್ರಯಾಣ ಮಾಡಿ, ನಂತರ ಎಂಟು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಮತಗಟ್ಟೆ ತಲುಪುತ್ತಾರೆ.
ಇತ್ತ, ತಮಿಳುನಾಡಿನ ಕೇವಲ ಐದು ಮತದಾರರಿರುವ ಥೇನಿ ಜಿಲ್ಲೆಯ ವಾರುಸನದ್ ಬೆಟ್ಟದವೆಲ್ಲಿಮಲೈ ಮತಗಟ್ಟೆಗೆ ತೆರಳಲು ಚುನಾವಣಾ ಸಿಬ್ಬಂದಿ ಕಡಿದಾದ ಎಟ್ಟದ ಹಾದಿಯಲ್ಲಿ ಮೂರು ಗಂಟೆ ನಡೆದು ಸಾಗಬೇಕು ಎಂದಿದ್ದಾರೆ.
ಚುನಾವಣಾ ಆಯೋಗವು ಭಾನುವಾರ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ಏಪ್ರಿಲ್ 9 ರಂದು, ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತ್ತು ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.
ನಾಲ್ಕು ರಾಜ್ಯಗಳು ಮತ್ತು ಪುದುಚೇರಿಯ ಒಟ್ಟು 824 ಸ್ಥಾನಗಳ ಮತ ಎಣಿಕೆ ಮೇ 4 ರಂದು ನಡೆಯಲಿದೆ.

