ನವದೆಹಲಿ: 'ಪಶ್ಚಿಮ ಏಷ್ಯಾ ಸಂಘರ್ಷ ಸೇರಿದಂತೆ ವಿಶ್ವದ ಯಾವುದೇ ಕಡೆ ಸಂಘರ್ಷ ನಡೆಯಲಿ, ನಾನು ಶಾಂತಿಯ ಪರವಾಗಿ ನಿಲ್ಲುತ್ತೇನೆ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ತರೂರ್, 'ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗುತ್ತಿರುವ ಹಾನಿಯು ಎಲ್ಲಾ ಮಿತಿಗಳನ್ನು ಮೀರಿದೆ. ಇದನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದ್ದಾರೆ.
'ಯುದ್ಧ ಸಣ್ಣ ವಿಚಾರವಲ್ಲ, ಇದು ಭಾರತೀಯರು ಸೇರಿದಂತೆ ಜಗತ್ತಿನಾದ್ಯಂತ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಈ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಪ್ರಯತ್ನಗಳ ಭಾಗವಾಗಿ ನಾವು ಇರಬೇಕು. ಅದರ ನೇತೃತ್ವವನ್ನು ನಾವೇ ವಹಿಸಬೇಕು. ನಮ್ಮೊಂದಿಗೆ ಕೈಜೋಡಿಸಲು ಅನೇಕ ದೇಶಗಳು ಸಿದ್ಧವಿವೆ. ಈ ಯುದ್ಧ ಮುಂದುವರಿಯುವುದನ್ನು ಯಾರೂ ಬಯಸುವುದಿಲ್ಲ' ಎಂದು ಹೇಳಿದ್ದಾರೆ.
'ಎರಡೂ ಕಡೆಯವರು ತಮ್ಮ ಪಟ್ಟುಗಳನ್ನು ಸಡಿಲಿಸುವ ಸಮಯ ಈಗ ಬಂದಿದೆ. ಅವರಿಗೆ ಭಾರತ ಮತ್ತು ಇತರ ದೇಶಗಳ ಸಹಾಯ ಹಾಗೂ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ಭಾರತ ಕೆಲಸ ಮಾಡಬೇಕು ಎಂದು ನಾನು ಭಾವಿಸುತ್ತೇನೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
'ಸಂಘರ್ಷದಿಂದ ತೈಲ ಬೆಲೆಗಳು ಏರುತ್ತಿವೆ. ಇಂಧನ ಪೂರೈಕೆ ಕಡಿಮೆಯಾಗುತ್ತಿದೆ. ಇದರಿಂದ ಪ್ರತಿಯೊಬ್ಬರೂ ಸಮಸ್ಯೆಗಳನ್ನು ಎದುರಿಸುವಂತಾಗಿದೆ' ಎಂದು ಬೇಸರ ಹೊರಹಾಕಿದ್ದಾರೆ.

