ಕೋಲ್ಕತ್ತ: ಮುಂಬರುವ ಪಶ್ಚಿಮಬಂಗಾಳ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಲು ನಿರ್ಧರಿಸಿದ ತನ್ನ ಸ್ವಾಮೀಜಿಯೊಬ್ಬರನ್ನು ಭಾರತ್ ಸೇವಾಶ್ರಮ ಸಂಘ (ಬಿಎಸ್ಎಸ್) ಉಚ್ಛಾಟಿಸಿದೆ.
ಈ ನಡೆ ತನ್ನ ನಿಯಮ ಹಾಗೂ ಮೌಲ್ಯಗಳಿಗೆ ವಿರುದ್ಧವಾಗಿದೆ. ಅಲ್ಲದೆ, ರಾಜಕೀಯ ಸ್ವರೂಪದ್ದಾಗಿದೆ ಎಂದು ಬಿಎಸ್ಎಸ್ ತನ್ನ ಆಂತರಿಕ ಸುತ್ತೋಲೆಯಲ್ಲಿ ತಿಳಿಸಿದೆ.
ಬಿಎಸ್ಎಸ್ನ ಉನ್ನತ ಮಟ್ಟದ ಸಭೆಯ ನಂತರ ಶನಿವಾರ ಹೊರಡಿಸಿದ ಈ ಆಂತರಿಕ ಸುತ್ತೋಲೆಯಲ್ಲಿ, ಉತ್ತರ ದಿನಜ್ಪುರ ಜಿಲ್ಲೆಯ ಕಾಲಿಯಗಂಜ್ ಕ್ಷೇತ್ರದಿಂದ ಬಿಜೆಪಿಯಿಂದ ನಾಮನಿರ್ದೇಶಿತರಾಗಿರುವ ಸ್ವಾಮಿ ಜ್ಯೋತಿರ್ಮಯಾನಂದ (ಉತ್ಪಲ್ ಮಹಾರಾಜ್) ಅವರನ್ನು ಭಾರತ್ ಸೇವಾಶ್ರಮ ಸಂಘ ಉಚ್ಛಾಟಿಸಿದೆ ಎಂದು ಸಂಘದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಸ್ವರ್ಧಿಸಲು ನಿರ್ಧರಿಸುವ ಮೂಲಕ ಸ್ವಾಮಿ ಜ್ಯೋತಿರ್ಮಯಾನಂದ ಅವರು ಸನ್ಯಾಸಿಗಳಿಂದ ನಿರಿಕ್ಷಿಸುವ ತ್ಯಾಗ ಹಾಗೂ ಶಿಸ್ತಿನ ಮಾರ್ಗದಿಂದ ದೂರ ಸರಿದಿದ್ದಾರೆ ಎಂದು ಸಂವಹನದಲ್ಲಿ ಹೇಳಲಾಗಿದೆ.
ಪಕ್ಷಪಾತ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಸಂಘ ಎತ್ತಿ ಹಿಡಿದ ಮೌಲ್ಯಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಅದು ಪ್ರತಿಪಾದಿಸಿದೆ.
ತನ್ನ ನಿಲುವನ್ನು ಮತ್ತೆ ದೃಢಪಡಿಸಿರುವ ಸಂಘ, ರಾಜಕೀಯ ವಿಷಯಗಳಲ್ಲಿ ಕಟ್ಟುನಿಟ್ಟಿನ ತಟಸ್ಥತೆ ಕಾಯ್ದುಕೊಳ್ಳುವುದಾಗಿ ಹಾಗೂ ತನ್ನ ಸನ್ಯಾಸಿಗಳು, ಬ್ರಹ್ಮಚಾರಿಗಳು, ಸಹಚರರು ಯಾವುದೇ ರಾಜಕೀಯ ಚಟುವಟಿಕೆಗಲ್ಲಿ ತೊಡಗಿಸಿಕೊಳ್ಳುವುದು ಅಥವಾ ಅನುಮೋದಿಸುವುದನ್ನು ನಿಷೇಧಿಸುವುದಾಗಿ ಹೇಳಿದೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಉತ್ಪಲ್ ಮಹಾರಾಜ್, ಬಿಜೆಪಿ ಟಿಕೆಟ್ನಲ್ಲಿ ಚುನಾವಣೆಯಲ್ಲಿ ಸ್ಫರ್ದಿಸಲು ಒಪ್ಪಿಕೊಳ್ಳುವ ಮುನ್ನ ಬಿಎಸ್ಎಸ್ನ ಕೇಂದ್ರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ತನ್ನ ರಾಜೀನಾಮೆ ಪತ್ರವನ್ನು ಬಿಎಎಸ್ ಅಂಗೀಕರಿಸಿದೆ ಎಂದರು.

