ಮುಂಬೈ: ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತಿ ಅಜಿತ್ ಪವಾರ್ ನಿವಾಸದ ಬಳಿ ನಡೆದಿದೆ ಎನ್ನಲಾದ ವಾಮಾಚಾರ ಘಟನೆ ಕುರಿತು ಸಂಪೂರ್ಣವಾಗಿ ತನಿಖೆ ನಡೆಸಬೇಕೆಂದು ಎನ್ಸಿಪಿ (ಎಸ್ಪಿ) ನಾಯಕ ರೋಹಿತ್ ಪವಾರ್ ಶುಕ್ರವಾರ ಒತ್ತಾಯಿಸಿದ್ದಾರೆ.
ಜನವರಿ 28ರಂದು ವಿಎಸ್ಆರ್ ವೆಂಚರ್ಸ್ ಒಡೆತನದ ವಿಮಾನ ಪತನಗೊಂಡು ಅಜಿತ್ ಪವಾರ್ ಹಾಗೂ ಇತರ ನಾಲ್ವರು ಮೃತಪಟ್ಟಿದ್ದರು.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ರೋಹಿತ್ ಪೋಸ್ಟ್ ಹಂಚಿಕೊಂಡಿದ್ದು, ಪುಣೆ ಜಿಲ್ಲೆಯ ಭಿಗ್ವಾನ್ ರಸ್ತೆಯಲ್ಲಿರುವ ಸಹಯೋಗ್ ಸೊಸೈಟಿಯಲ್ಲಿರುವ ಅಜಿತ್ ಪವಾರ್ ಅವರ ನಿವಾಸದ ಹೊರಗೆ ಮತ್ತು ಮುಂಬೈನ ದೇವಗಿರಿ ಬಂಗಲೆಯ ಬಳಿ ವಾಮಾಚಾರ ಪ್ರಯೋಗವಾಗಿದ್ದು, ಇದರಲ್ಲಿ ನಾಸಿಕ್ನ ಜ್ಯೋತಿಷಿ ಭಾಗಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದಲ್ಲಿ, ಮೂಢನಂಬಿಕೆ ಅಥವಾ ಅಂತಹ ಆಚರಣೆಗಳಿಗೆ ಸ್ಥಳವಿಲ್ಲ. ಆದರೂ, ಈಗ ಬೆಳಕಿಗೆ ಬರುತ್ತಿರುವ ವಿಷಯಗಳು ಅತ್ಯಂತ ಗಂಭೀರವಾಗಿ ಕಾಣುತ್ತಿವೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಸಂಬಂಧ ಅಜಿತ್ ಪವಾರ್ ಅವರ ಸೋದರಳಿಯ ಕರ್ಜತ್-ಜಮಖೇಡ್ ಶಾಸಕ ಪ್ರತಿಕ್ರಿಯಿಸಿದ್ದು, ಘಟನೆಗಳ ಬಗ್ಗೆ ತನಿಖೆ ಮಾಡಿ. ಈ ಕೃತ್ಯಗಳ ಹಿಂದಿರುವ ರಾಜಕೀಯ ಉದ್ದೇಶವನ್ನು ಹಾಗೂ ನಡೆಸಿದವರಾರು ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

