ಚಂಡೀಗಢ: ರಾಜ್ಯ ಉಗ್ರಾಣ ನಿಗಮದ ಅಧಿಕಾರಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪಂಜಾಬ್ ಮಾಜಿ ಸಚಿವ, ಎಎಪಿ ಶಾಸಕ ಲಾಲಜಿತ್ ಸಿಂಗ್ ಭುಲ್ಲಾರ್ ಅವರನ್ನು ಸೋಮವಾರ ಬಂಧಿಸಲಾಗಿದೆ.
ಅಮೃತಸರದಲ್ಲಿರುವ ರಾಜ್ಯ ಉಗ್ರಾಣ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದ ಗಗನ್ದೀಪ್ ಸಿಂಗ್ ರಾಂಧವ ಅವರು ಶನಿವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಲಾಲಜಿತ್ ಸಿಂಗ್ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ, ಸಾಯುವ ಮೊದಲು ಮಾಡಿದ್ದ ವಿಡಿಯೊದಲ್ಲಿ ಗಗನ್ದೀಪ್ ಆರೋಪಿಸಿದ್ದರು. ಈ ಆರೋಪದ ಬೆನ್ನಲ್ಲೆ, ಮುಖ್ಯಮಂತ್ರಿ ಭಗವಂತ್ ಮಾನ್ ಸೂಚನೆಯಂತೆ ಲಾಲಜಿತ್ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಪ್ರಕರಣ ಸಂಬಂಧ ಲಾಲಜಿತ್, ಅವರ ತಂದೆ ಸುಖ್ದೇವ್ ಸಿಂಗ್ ಭುಲ್ಲಾರ್ ಮತ್ತು ಆಪ್ತಸಹಾಯಕ ದಿಲ್ಬಾಗ್ ಸಿಂಗ್ ಅವರ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿತ್ತು.
'24 ಗಂಟೆಯೊಳಗೆ ಭುಲ್ಲಾರ್ ಅವರನ್ನು ಬಂಧಿಸುವಂತೆ' ಮೃತ ಗಗನ್ದೀಪ್ ಕುಟುಂಬಸ್ಥರು ಆಗ್ರಹಿಸಿದ್ದರು.

