ಶ್ರೀನಗರ: ಆಯತೊಲ್ಲಾ ಅಲಿ ಖಮೇನಿ ಹತ್ಯೆ ಖಂಡಿಸಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದ ಕಾರಣ ಅವುಗಳನ್ನು ನಿಯಂತ್ರಿಸಲು ವಿಧಿಸಿದ್ದ ನಿರ್ಬಂಧವು ಬುಧವಾರವೂ ಮುಂದುವರಿದಿತ್ತು.
ಮುಂಜಾಗ್ರತಾ ಕ್ರಮವಾಗಿ ಶಾಲೆ, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಶನಿವಾರದವರೆಗೆ ರಜೆ ನೀಡಲಾಗಿದೆ.
ಮೊಬೈಲ್ ಇಂಟರ್ನೆಟ್ ಸೇವೆಯ ವೇಗವನ್ನು ಕಡಿತಗೊಳಿಸಲಾಗಿದೆ. ಕಾಶ್ಮೀರದ ಹಲವೆಡೆ ಜನರು ಗುಂಪು ಸೇರಲು, ಪ್ರತಿಭಟನೆ ಮಾಡಲು ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
'ಶಿಯಾ ಮುಸ್ಲಿಮರು ಹೆಚ್ಚಾಗಿರುವ ಸ್ಥಳಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ನಗರದಾದ್ಯಂತ ಭಾರಿ ಸಂಖ್ಯೆಯಲ್ಲಿ ಪೊಲೀಸ್ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ' ಎಂದು ಹೇಳಿದರು.
'ಲಾಲ್ಚೌಕ್ ಸೇರಿದಂತೆ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಜಿಲ್ಲಾ ಕೇಂದ್ರಗಳಲ್ಲೂ ಇದೇ ರೀತಿಯ ವಾತಾವರಣ ಇದೆ' ಎಂದು ಹೇಳಿದರು.
ಈ ಮಧ್ಯೆ, ಪ್ರತಿಭಟನೆಗೆ ಸಂಬಂಧಿಸಿದ ಸಾಮಾಜಿಕ ಜಾಲತಾಣ ಪೋಸ್ಟ್ಗೆ ಸಂಬಂಧಿಸಿದಂತೆ ಶ್ರೀನಗರ ಸಂಸದ ಆಗಾ ರುಹುಲ್ಲಾ ಮತ್ತು ಮಾಜಿ ಮೇಯರ್ ಜುನೈದ್ ಆಜಿಂ ಮಟ್ಟು ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

