ಕೋಲ್ಕತ್ತಾ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು, ಮುಂಬರುವ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಕೇಸರಿ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಆಹಾರ ಪದ್ಧತಿಯ ಮೇಲೆ ನಿರ್ಬಂಧ ವಿಧಿಸುತ್ತದೆ ಎಂದು ಭಾನುವಾರ ಆರೋಪಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಸರ್ಕಾರದ ವಿರುದ್ಧ 'ಚಾರ್ಜ್ಶೀಟ್' ಬಿಡುಗಡೆ ಮಾಡಿದ ಒಂದು ದಿನದ ನಂತರ ಮಮತಾ ಬ್ಯಾನರ್ಜಿ, ವಾಗ್ದಾಳಿಯನ್ನು ತೀಕ್ಷ್ಣಗೊಳಿಸಿದ್ದಾರೆ.
ಇಂದು ಪುರುಲಿಯಾ ಜಿಲ್ಲೆಯ ಮನ್ಬಜಾರ್ನಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬ್ಯಾನರ್ಜಿ, "ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನರು ತಮ್ಮ ಆಹಾರ ಪದ್ಧತಿಯ ಆದ್ಯತೆಗಳ ಪ್ರಕಾರ ಮೀನು, ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಈಗಾಗಲೇ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇವುಗಳನ್ನು ನಿಷೇಧಿಸಿದೆ. ಜನರ ಆಹಾರ ಪದ್ಧತಿಯನ್ನು ನಿರ್ಬಂಧಿಸಲು ನೀವು ಯಾರು?" ಎಂದು ಪ್ರಶ್ನಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಮೀನು, ಮಾಂಸ, ಮೊಟ್ಟೆ ತಿನ್ನುವುದನ್ನು ನಿಷೇಧಿಸುತ್ತಾರೆ. ನಿಮ್ಮ ಆಹಾರದ ಹಕ್ಕನ್ನು ಕಸಿದುಕೊಳ್ಳುತ್ತಾರೆ. ಕಾರಣ ಅವರಿಗೆ ಬೇರೆ ಯಾವುದೇ ಧರ್ಮದಲ್ಲಿ ನಂಬಿಕೆ ಇಲ್ಲ. ಬಿಜೆಪಿಗೆ ಗೊತ್ತಿರುವುದು ಗಲಭೆ ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
"ಈ ಎಲ್ಲಾ ಆಹಾರ ಪದಾರ್ಥಗಳು ಪ್ರೋಟೀನ್ನಲ್ಲಿ ಸಮೃದ್ಧವಾಗಿವೆ ಮತ್ತು ಅಂತಹ ನಿರ್ಬಂಧಗಳನ್ನು ವಿಧಿಸಿದರೆ ನಿಮ್ಮ ಆರೋಗ್ಯವು ಹದಗೆಡುತ್ತದೆ. ನಾನು ಯಾವ ಸಂಗೀತ ವಾದ್ಯಗಳು, ಡ್ರಮ್ಗಳು, ಹಾರ್ಮೋನಿಯಂಗಳು, ಶಿಳ್ಳೆಗಳು, ಗಿಟಾರ್ಗಳು, ಸಿತಾರ್ಗಳನ್ನು ನುಡಿಸಬೇಕು ಎಂದು ನೀವು ನಿರ್ಧರಿಸುತ್ತೀರಾ?" ಎಂದು ದೀದಿ ಪ್ರಶ್ನಿಸಿದರು.
ಅಮಿತ್ ಶಾ "ಅವರ ಹಿಂದಿನ ಕೃತ್ಯಗಳ ವಿರುದ್ಧ ಚಾರ್ಜ್ಶೀಟ್ ಹಾಕಬೇಕು" ಎಂದು ಪಶ್ಚಿಮ ಬಂಗಾಳ ಸಿಎಂ ತಿರುಗೇಟು ನೀಡಿದರು.
ಬಿಜೆಪಿ ಅಧಿಕಾರಕ್ಕೆ ಬಂದರೆ 'ಲಕ್ಷ್ಮಿ ಭಂಡಾರ್' ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ಬ್ಯಾನರ್ಜಿ ಆರೋಪಿಸಿದರು.

