ಕಾಸರಗೋಡು: ಕನ್ನಡ ಭಾಷೆ,ಸಂಸ್ಕೃತಿಯನ್ನು ಸಂರಕ್ಷಿಸುತ್ತಾ ಬಂದಿರುವ ಕಾಸರಗೋಡು ಕನ್ನಡ ಗ್ರಾಮದಲ್ಲಿ ಇಂದು ಮಕ್ಕಳ ಕಲರವ ಅನುರಣಿಸಲಿದೆ.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಕಾಸರಗೋಡು ಜಿಲ್ಲಾ ಮಕ್ಕಳ ಸಾಹಿತ್ಯೋತ್ಸವ ಜರಗಲಿದೆ. ಇದೇ ಸಂದರ್ಭದಲ್ಲಿ ಕಾಸರಗೋಡು - ಕರ್ನಾಟಕ ಮಕ್ಕಳ ಕವಿಗೋಷ್ಠಿ, ಮಕ್ಕಳ ಸಾಂಸ್ಕೃತಿಕ ಉತ್ಸವ ರಂಗೇರಲಿದೆ.
ಕಾರ್ಯಕ್ರಮವನ್ನು ಸಂಜೆ 4.00 ಗಂಟೆಗೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಸಚಿನ್ ಶ್ರಾವಣಬೆಳಗೊಳ ಉದ್ಘಾಟಿಸುವರು. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಗಡಿನಾಡ ಚೇತನ ಪ್ರಶಸ್ತಿ ಪುರಸ್ಕೃತ ರಾಧಾಕೃಷ್ಣ. ಕೆ. ಉಳಿಯತಡ್ಕ ದಿಕ್ಸೂಚಿ ಭಾಷಣ ಮಾಡುವರು. ನ್ಯಾಯದಾದಿ ಪರಿಮಳ. ರಾವ್. ಕೆ. ಮಂಗಳೂರು, ಸಂಜೀವ ದುಮುಕನಾಳ ಧಾರವಾಡ, ಸಿಹಾನ ಬಿ. ಎಂ ಉಳ್ಳಾಲ, ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ, ಜಯಾನಂದ ಕುಮಾರ್ ಹೊಸದುರ್ಗ, ಕೆ. ಗುರುಪ್ರಸಾದ್ ಕೋಟೆಕಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಂತರ ಕಾಸರಗೋಡು - ಕರ್ನಾಟಕ ಮಕ್ಕಳ ಕವಿಗೋಷ್ಠಿ ನಡೆಯಲಿದೆ. ಗಡಿನಾಡ ಕನ್ನಡಿತಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಮಕ್ಕಳ ಸಮೂಹ ಗೀತಾ ಗಾಯನ, ಸಂಜೀವ ದುಮಕನಾಳ ಧಾರವಾಡ ನೇತೃತ್ವದಲ್ಲಿ ಮಕ್ಕಳ ಸಾಂಸ್ಕೃತಿಕ ಉತ್ಸವ ಜರಗಲಿದೆ. ಕೆ. ಜಗದೀಶ ಕೂಡ್ಲು ಪ್ರಾಸ್ತಾವಿಕ ಭಾಷಣ ಮಾಡುವರು. ಕನ್ನಡ ಗ್ರಾಮದ ಕಾವ್ಯ ಕುಶಲ ಸ್ವಾಗತಿಸುವರು. ಕೃಪಾನಿಧಿ ಮತ್ತು ಅನುಷಾ ಕಾರ್ಯಕ್ರಮ ನಿರೂಪಿಸುವರು.

