ಮಲಪ್ಪುರಂ: ಕೇರಳದ ಚುನಾವಣೆ ಹಿನ್ನೆಲೆಯಲ್ಲಿ ಮಲಪ್ಪುರಂ ಜಿಲ್ಲೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರಿಗೆ ಉಚಿತ ಯುಎಇ ಪ್ರವಾಸದ ಆಮಿಷ ಒಡ್ಡಿದಕ್ಕೆ ಸಂಬಂಧಿಸಿದಂತೆ ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ತಾವನೂರು ಕ್ಷೇತ್ರದಲ್ಲಿ ಯುಡಿಎಫ್ ಅಭ್ಯರ್ಥಿಗೆ ಅತಿ ಹೆಚ್ಚು ಮತಗಳನ್ನು ಪಡೆದ ಬೂತ್ ಮಟ್ಟದ ಕಾರ್ಯಕರ್ತರಿಗೆ ಉಚಿತ ವಿದೇಶ ಪ್ರವಾಸದ ಆಫರ್ ಮಾಡಲಾಗಿತ್ತು.
ಈ ಸಂಬಂಧ ಐಯುಎಂಎಲ್ ರಾಜ್ಯ ಘಟಕದ ಉಪಾಧ್ಯಕ್ಷ ಬಾವಾ ಹಾಜಿ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಮಾರ್ಚ್ 22ರಂದು ಪ್ರಚಾರದ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ವಿ.ಎಸ್. ಜಾಯ್ ಪರ ಗರಿಷ್ಠ ಮತಗಳನ್ನು ಸಂಗ್ರಹಿಸುವ ಪಕ್ಷದ ಬೂತ್ ಮಟ್ಟದ ಸದಸ್ಯರಿಗೆ 15 ದಿನಗಳ ವಿದೇಶ ಪ್ರವಾಸದ ಆಮಿಷವನ್ನು ಒಡ್ಡಿದ್ದರು.
ಈ ವಿಷಯವನ್ನು ಎಲ್ಡಿಎಫ್ ಪ್ರತಿನಿಧಿಗಳು ಚನಾವಣಾ ಆಯೋಗದ ಗಮನಕ್ಕೆ ತಂದಿದ್ದರು. ಪರಿಶೀಲನೆಯ ಬಳಿಕ ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಚುನಾವಣಾ ಆಯೋಗ ಖಚಿತಪಡಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹೇಳಿಕೆಗೆ ಸಂಬಂಧಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ತವರೂರಿನಲ್ಲಿ ಎಲ್ಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕೆ.ಟಿ. ಜಲೀಲ್ ವಿರುದ್ದ ಜಾಯ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ರವಿ ಥೇಲತ್ ಕಣದಲ್ಲಿದ್ದಾರೆ.
140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 9ರಂದು ಮತದಾನ ನಡೆಯಲಿದ್ದು, ಮೇ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.

