ತಿರುವನಂತಪುರ: ಪ್ರಯಾಗರಾಜ್ನ ಕುಂಭಮೇಳದ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಮೊನಾಲಿಸಾ ಭೋಂಸ್ಲೆ ಎನ್ನುವ ಯುವತಿ ಮತ್ತೆ ಸುದ್ದಿಯಲ್ಲಿದ್ದಾರೆ.
ನಾನು ನನ್ನ ಗೆಳೆಯನ ಜತೆ ಇದ್ದೇನೆ. ಅವನನ್ನೇ ಮದುವೆಯಾಗಬೇಕು ಎಂದಿದ್ದು, ದಯವಿಟ್ಟು ನನ್ನ ತಂದೆಯಿಂದ ನನ್ನನ್ನು ಕಾಪಾಡಿ ಎಂದು ತಿರುವನಂತಪುರ ಪೊಲೀಸರ ಮೊರೆ ಹೋಗಿದ್ದಾಳೆ.
ಬುಧವಾರ(ಮಾ.11) ತಂಪನೂರು ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡ ಮೊನಾಲಿಸಾ, ನಾನು ಸಿನಿಮಾ ಚಿತ್ರೀಕರಣವೊಂದರ ಭಾಗವಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ತಂದೆ ನನ್ನನ್ನು ಬಲವಂತವಾಗಿ ನಮ್ಮ ಊರಿಗೆ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾಳೆ.
ಮೊನಾಲಿಸಾ ಹಾಗೂ ಉತ್ತರ ಪ್ರದೇಶ ಮೂಲದ ಅವಳ ಸ್ನೇಹಿತನು ಪೊಲೀಸ್ ಠಾಣೆಗೆ ಬಂದು ರಕ್ಷಣೆ ಕೋರಿದ್ದಾರೆ. ಅವಳ ಅಭಿಪ್ರಾಯಕ್ಕೆ ವಿರುದ್ಧವಾಗಿ ಅವಳ ತಂದೆಯು ಅವಳನ್ನು ಮರಳಿ ಕರೆಸಿಕೊಳ್ಳಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಿದ್ದಾಳೆ. ಈ ವೇಳೆ ಸಿನಿಮಾದ ಇತರೆ ಸಿಬ್ಬಂದಿಗಳು ಕೂಡ ಠಾಣೆಗೆ ಬಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸಿನಿಮಾದ ಚಿತ್ರೀಕರಣಕ್ಕಾಗಿ ಅವರಿಬ್ಬರು ಕೇರಳಕ್ಕೆ ಬಂದಿದ್ದಾರೆ. ತನ್ನ ಗೆಳೆಯನೊಂದಿಗೆ ಮದುವೆಯಾಗುವುದಾಗಿ ಮೊನಾಲಿಸಾ ತಿಳಿಸಿದ್ದು, ಅವಳು ತನ್ನ ತಂದೆಯೊಂದಿಗೆ ತೆರಳುವುದಕ್ಕೆ ನಿರಾಕರಿಸಿದ್ದಾಳೆ. ಅವಳು ಅಪ್ರಾಪ್ತೆಯಲ್ಲದೇ ಇರುವುದಿಂದ, ಅವಳಿಷ್ಟದಂತೆ ಅವಳು ನಿರ್ಧಾರ ತೆಗೆದುಕೊಳ್ಳಬಹುದು. ಅವಳ ತಂದೆ ಈಗಾಗಲೇ ಅವರ ಊರಿಗೆ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಪೊಲೀಸರ ಸಹಾಯದೊಂದಿಗೆ ಮೊನಾಲಿಸಾ ತನ್ನ ಗೆಳೆಯನೊಂದಿಗೆ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆದ ಕುಂಭಮೇಳದ ವೇಳೆ ರುದ್ರಾಕ್ಷಿ ಮಾಲೆ ಮಾರುತ್ತಿದ್ದ ಇಂದೋರ್ ಮೂಲದ ಮೊನಾಲಿಸಾ ಭೋಂಸ್ಲೆಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

