ಅಮರಾವತಿ: ಹಿರಿಯ ನಾಯಕ ಸಿ. ನಾರಾಯಣರಾವ್ ಸೇರಿದಂತೆ ಒಂಬತ್ತು ಮಂದಿ ನಕ್ಸಲರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಆಂಧ್ರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಹರೀಶ್ ಕುಮಾರ್ ಗುಪ್ತ ಅವರು ಸೋಮವಾರ ತಿಳಿಸಿದ್ದಾರೆ.
'ಆಂಧ್ರ-ಒಡಿಶಾ ಗಡಿ ಘಟಕದ (ಎಒಬಿ) ಕಾರ್ಯದರ್ಶಿಯಾಗಿದ್ದ ರಾವ್ ಅವರು, 36 ವರ್ಷಗಳಿಂದ ನಕ್ಸಲ್ ಚಳವಳಿಯಲ್ಲಿದ್ದರು.
ಈ ಶರಣಾಗತಿಯೊಂದಿಗೆ 'ಎಡಪಂಥೀಯ ತೀವ್ರವಾದ' ರಾಜ್ಯದಲ್ಲಿ ಅಂತ್ಯಗೊಂಡಂತಾಗಿದೆ. ಕೇಂದ್ರ ಸರ್ಕಾರ 2026ರ ಮಾರ್ಚ್ 31ರೊಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಹೊಂದಿತ್ತು. ರಾಜ್ಯವೂ ಇದಕ್ಕೆ ಕೈಜೋಡಿಸಿದೆ' ಎಂದು ಗುಪ್ತ ಅವರು ತಿಳಿಸಿದರು.
'ಎರಡು ವರ್ಷಗಳಿಂದ ರಾಜ್ಯವನ್ನು ನಕ್ಸಲ್ ಮುಕ್ತಗೊಳಿಸಲು ಕಾರ್ಯಾಚರಣೆ ಸೇರಿ ಹಲವು ಪ್ರಕ್ರಿಯೆಗಳು ನಡೆದಿದ್ದವು. ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ನಕ್ಸಲರಿಗೆ ಸೂಚಿಸಲಾಗಿತ್ತು. ಈಗ 'ಎಡಪಂಥೀಯ ತೀವ್ರವಾದ' ಅಂತ್ಯಗೊಂಡಿದೆ' ಎಂದು ಅವರು ಹೇಳಿದರು.

