ಭುವನೇಶ್ವರ: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾದ ತನ್ನ ಮೂವರು ಶಾಸಕರನ್ನು ಕಾಂಗ್ರೆಸ್ ಮಂಗಳವಾರ ಅಮಾನತುಗೊಳಿಸಿದೆ.
ಏ.2ರಂದು ತೆರವಾಗಲಿರುವ ರಾಜ್ಯದ ನಾಲ್ಕು ರಾಜ್ಯಸಭಾ ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಡೆದಿದ್ದು, ಬಿಜೆಪಿ ಅಭ್ಯರ್ಥಿಗಳಾದ ಮನಮೋಹನ ಸಮಲ್ ಮತ್ತು ಸುಜೀತ್ ಕುಮಾರ್, ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ದಿಲೀಪ್ ರೇ ಹಾಗೂ ಪ್ರತಿಪಕ್ಷ ಬಿಜೆಡಿಯ ಸಂತೃಪ್ತ ಮಿಶ್ರಾ ಅವರು ಆಯ್ಕೆಯಾಗಿದ್ದಾರೆ.
ಮತದಾನದ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಭಕ್ತಚರಣ ದಾಸ್ ಅವರು, ಪಕ್ಷದ ಮೂವರು ಶಾಸಕರಾದ ರಮೇಶ್ ಜೇನಾ, ದಶರಥಿ ಗೋಮಾಂಗೊ ಮತ್ತು ಸೋಫಿಯಾ ಫಿರ್ದೌಸ್ ಅವರು ಆಡಳಿತಾರೂಢ ಬಿಜೆಪಿ ಪರವಾಗಿ ಮತಗಳನ್ನು ಚಲಾಯಿಸಿದ್ದಾರೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಈ ಶಾಸಕರ ವಿರುದ್ಧ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.
ಜೇನಾ, ಗೋಮಾಂಗೊ ಮತ್ತು ಫಿರ್ದೌಸ್ ಮಂಗಳವಾರ ಕಾಂಗ್ರೆಸ್ನಿಂದ ಅಮಾನತುಗೊಂಡಿದ್ದಾರೆ.
ಇದಕ್ಕೂ ಮುನ್ನ ಬಿಜೆಡಿಯ ಉಪ ಸಚೇತಕ ಪ್ರತಾಪ ಕೇಸರಿ ದೇವ್ ಅವರೂ, ತನ್ನ ಪಕ್ಷದ ಎಂಟು ಶಾಸಕರು ರೇ ಪರವಾಗಿ ಅಡ್ಡ ಮತದಾನ ಮಾಡಿದ್ದಾರೆ ಎಂದು ತಿಳಿಸಿದ್ದರು.
ಬಿಜೆಪಿ 'ಕುದುರೆ ವ್ಯಾಪಾರ'ದಲ್ಲಿ ತೊಡಗಿದೆ ಎಂದು ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಆರೋಪಿಸಿದ್ದರು.
10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗಾಗಿ ಸೋಮವಾರ ಚುನಾವಣೆ ನಿಗದಿಯಾಗಿದ್ದು, 26 ಅಭ್ಯರ್ಥಿಗಳು ಅವಿರೋಧ ಗೆಲುವು ಸಾಧಿಸಿದ್ದರು. ಬಿಹಾರದ ಐದು, ಒಡಿಶಾದ ನಾಲ್ಕು ಮತ್ತು ಹರ್ಯಾಣದ ಎರಡು ಸೇರಿದಂತೆ ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
ಒಡಿಶಾದ ಮೂರು ಸ್ಥಾನಗಳ ಜೊತೆಗೆ ಬಿಹಾರದ ಎಲ್ಲ ಐದೂ ಸ್ಥಾನಗಳನ್ನು ಎನ್ಡಿಎ ಗೆದ್ದಿದೆ. ಹರ್ಯಾಣದ ಒಂದು ಸ್ಥಾನ ಎನ್ಡಿಎ ಪಾಲಾಗಿದ್ದರೆ,ಇನ್ನೊಂದು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ.

