ಸಾಮಾನ್ಯವಾಗಿ ಚಲಿಸುವ ರೈಲಿನಲ್ಲಿ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಂಡರೆ, ಮುಂದಿನ ನಿಲ್ದಾಣದಲ್ಲಿ ಇಳಿದು ಆಸ್ಪತ್ರೆಗೆ ಹೋಗಬೇಕು ಅಥವಾ ತಮ್ಮ ಕೊನೆಯ ನಿಲ್ದಾಣ ಬರುವವರೆಗೂ ಕಾದು ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಆದರೆ, ಚಲಿಸುತ್ತಿರುವ ರೈಲಿನಲ್ಲಿ ಅಸ್ವಸ್ಥಗೊಂಡ ಮಗುವಿಗೆ ರೈಲ್ವೆ ಇಲಾಖೆಯೇ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮ ವೇಗವಾಗಿರುವುದರಿಂದ ಯಾವುದೇ ಘಟನೆ ನಡೆದರೂ ಕೂಡ ಕ್ಷಣಮಾತ್ರದಲ್ಲಿ ಜಗತ್ತಿಗೆ ಗೊತ್ತಾಗುತ್ತದೆ. ಅದರಂತೆ, ರೈಲಿನಲ್ಲಿ ನಡೆದ ಅಪರೂಪದ ಘಟನೆ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ದಂತವೈದ್ಯೆ ಭಾವನಾ ಎಂಬುವವರು ಮಾರ್ಚ್ 13ರಂದು ಬೆಂಗಳೂರಿನಿಂದ ಗುಜರಾತ್ಗೆ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ನುಗ್ಗೆಕಾಯಿ ಸೂಪ್ ಸೇವಿಸಿದ ಅವರ ಮಗು ಇದ್ದಕ್ಕಿದ್ದಂತೆ ಅಸ್ವಸ್ಥಗೊಳ್ಳುತ್ತದೆ. ಬಳಿಕ ಏನು ಮಾಡಬೇಕು ಎಂಬುದು ತಿಳಿಯದೆ ಆತಂಕಕ್ಕೆ ಒಳಗಾದ ಭಾವನಾ, ಕೂಡಲೇ ರೈಲಿನ ಟಿಟಿಇ ಗಮನಕ್ಕೆ ತರುತ್ತಾರೆ.
'ಮಗು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಗಾಬರಿಗೊಂಡ ನಾನು, ಅವರಿಂದ ಯಾವುದೇ ನಿರೀಕ್ಷೆ ಇಲ್ಲದರ ಹೊರತಾಗಿಯೂ ಟಿಟಿಇ ಅವರ ಬಳಿ ಚಲಿಸುವ ರೈಲಿನಲ್ಲಿ ಔಷಧಿಗಳನ್ನು ಹೇಗೆ ಆರ್ಡರ್ ಮಾಡಬೇಕು ಎಂದು ಕೇಳಿದೆ' ಎಂದು ವಿಡಿಯೊದಲ್ಲಿ ವಿವರಿಸಿದ್ದಾರೆ.
ಆದರೆ, ನಂತರ ನಡೆದ ಘಟನೆಯೂ ತಮ್ಮನ್ನು ಅಚ್ಚರಿಗೊಳಿಸಿರುವುದಾಗಿ ಅವರು ಹೇಳಿದ್ದಾರೆ. 'ರೈಲಿನಲ್ಲಿ ತುರ್ತು ಚಿಕಿತ್ಸೆಯನ್ನು ಮಾತ್ರ ನೀಡದೆ, ರೈಲಿನ ಮುಂದಿನ ನಿಲ್ದಾಣವಾದ ಹಿಂದೂಪುರ ತಲುಪುವುದರೊಳಗಾಗಿ ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಜರಿದ್ದರು. ಬಳಿಕ ವೈದ್ಯರು ಮಗುವನ್ನು ಪರೀಕ್ಷಿಸಿ ಅಗತ್ಯ ಔಷಧಿಗಳನ್ನು ನೀಡಿ ನಮ್ಮ ಆತಂಕ ದೂರ ಮಾಡಿದರು' ಎಂದು ಮಹಿಳೆ ಹೇಳಿಕೊಂಡಿದ್ದಾರೆ.
'ಮಾತ್ರವಲ್ಲ, ಚಿಕಿತ್ಸೆ ನೀಡಿದ ಬಳಿಕ ನಮ್ಮಿಂದ ಯಾವುದೇ ಹೆಚ್ಚುವರಿ ಹಣ ಪಡೆಯದ ವೈದ್ಯರು, ನಮಗೆ ಸರಿಯಾದ ಬಿಲ್ ಅನ್ನು ಸಹ ಒದಗಿಸಿದರು. ಅವರು ಅಷ್ಟು ತುರ್ತಾಗಿ ಹೇಗೆ ಕಾರ್ಯನಿರ್ವಹಿಸಿದರು ಎಂಬುದರ ಕುರಿತು ನನಗೆ ಈಗಲೂ ಅಚ್ಚರಿಯಾಗುತ್ತಿದೆ. ನಾನು ಆ ಸಿಬ್ಬಂದಿಗೆ ಹಾಗೂ ರೈಲ್ವೆ ಇಲಾಖೆಗೆ ಕೃತಜ್ಞಳಾಗಿದ್ದೇನೆ' ಎಂದು ಹೇಳಿದ್ದಾರೆ.
'ಚಲಿಸುವ ರೈಲಿನಲ್ಲಿ ನನ್ನ ಮಗುವಿಗೆ ತುರ್ತು ಚಿಕಿತ್ಸೆಯ ಅಗತ್ಯವಿತ್ತು ಮತ್ತು ನಾನು ಊಹಿಸಿದ್ದಕ್ಕಿಂತ ವೇಗವಾಗಿ ನನ್ನ ಮಗುವಿಗೆ ಚಿಕಿತ್ಸೆ ದೊರಕಿತು' ಎಂದು ಭಾವನಾ ಅವರು ಹೇಳಿದ್ದಾರೆ.
ಸದ್ಯ, ಮಹಿಳೆ ಹಂಚಿಕೊಂಡಿರುವ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದ್ದು, ಬರೋಬ್ಬರಿ 27 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಅನೇಕ ಬಳಕೆದಾರರು ರೈಲ್ವೆ ಸಿಬ್ಬಂದಿಯ ತ್ವರಿತಗತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

