ನಾಗ್ಪುರ: ಇಡೀ ಜಗತ್ತು ಇಂದು ಯುದ್ಧದ ಭೀತಿಯಲ್ಲಿದ್ದು, ಮಾತುಕತೆಯ ಮೂಲಕ ಮಾತ್ರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಶನಿವಾರ ಅಭಿಪ್ರಾಯಪಟ್ಟಿದ್ದಾರೆ.
ನಾಗ್ಪುರದ ಆಯೋಜಿಸಿದ್ದ 'ಭಾರತೀಯ ಯುವ ಸಂಸತ್ತಿನ' 29ನೇ ರಾಷ್ಟ್ರೀಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಅವರು, ಇಡೀ ಜಗತ್ತು ಯುದ್ಧದ ಆತಂಕದಲ್ಲಿದೆ.
ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಯುವ ಸಂಸತ್ತು ಚರ್ಚಿಸುವುದನ್ನು, ವಿವಿಧ ದೃಷ್ಟಿಕೋನಗಳನ್ನು ಆಲಿಸುವ ಮತ್ತು ಸಂವಾದದ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಬಗ್ಗೆ ನಮಗೆ ಕಲಿಸುತ್ತದೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ತಮಿಳು ಮತ್ತು ಗುಜರಾತಿ ಭಾಷೆಗಳಿಗೆ ಅನುವಾದಿಸಲಾದ ಸಂವಿಧಾನದ ಪ್ರತಿಗಳನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಿದ ಅವರು, ಡೋಗ್ರಿ, ಸಂತಾಲಿ ಸೇರಿದಂತೆ ಹಲವಾರು ಸ್ಥಳೀಯ ಭಾಷೆಗಳಲ್ಲಿ ಸಂವಿಧಾನ ಪ್ರತಿ ಲಭ್ಯವಾಗುವಂತೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಬಜೆಟ್ ಅಧಿವೇಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಸತ್ತಿನಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಅವು ಸಂಘರ್ಷಕ್ಕೆ ದಾರಿಯಾಗಬಾರದು. ಅಂತಿಮವಾಗಿ ತಾರ್ಕಿಕ ತೀರ್ಮಾನ ಮತ್ತು ಪರಿಹಾರವನ್ನು ಕಂಡುಕೊಳ್ಳುವುದೇ ಸಂವಾದದ ಉದ್ದೇಶ. ವಿಕಸಿತ ಭಾರತದ ಗುರಿ ತಲುಪಲು ಇಂತಹ ಅರ್ಥಪೂರ್ಣ ಚರ್ಚೆಗಳು ಅತ್ಯಗತ್ಯ ಎಂದು ಹೇಳಿದ್ದಾರೆ.

