ಮಲಪ್ಪುರ: ತವನೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯು ಬೃಹತ್ ಅಂತರದಿಂದ ಗೆಲುವು ಸಾಧಿಸಿದರೆ, ಪಕ್ಷದ ಸ್ಥಳೀಯ ಕಾರ್ಯಕರ್ತರನ್ನು ಗಲ್ಫ್ ದೇಶಗಳಿಗೆ ಉಚಿತವಾಗಿ ಪ್ರವಾಸಕ್ಕೆ ಕರೆದೊಯ್ಯಲಾಗುವುದು ಎಂದು ಐಯುಎಂಎಲ್ನ ಹಿರಿಯ ಮುಖಂಡರು ಘೋಷಿಸಿರುವುದು, ಮಲಪ್ಪುರ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್), ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ನ ಪ್ರಮುಖ ಮಿತ್ರಪಕ್ಷವಾಗಿದೆ.
ತವನೂರಿನಲ್ಲಿ ಮಂಗಳವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಐಯುಎಂಎಲ್ ರಾಜ್ಯ ಉಪಾಧ್ಯಕ್ಷ ಸಿ.ಪಿ. ಬಾವಾ ಹಾಜಿ ಅವರು ಗಲ್ಫ್ ದೇಶಗಳ ಉಚಿತ ಪ್ರವಾಸವನ್ನು ಘೋಷಿಸಿದ್ದಾರೆ.
ಕ್ಷೇತ್ರದ ಯುಡಿಎಫ್ ಅಭ್ಯರ್ಥಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿ.ಎಸ್. ಜಾಯ್ ಅವರಿಗೆ ಹೆಚ್ಚಿನ ಮುನ್ನಡೆ ಖಚಿತಪಡಿಸಿಕೊಳ್ಳಲು ನೆರವಾಗುವ ಪಕ್ಷದ ಮಂಡಲ ಹಾಗೂ ಪಂಚಾಯಿತಿ ಸಮಿತಿ ಪದಾಧಿಕಾರಿಗಳಿಗೆ 15 ದಿನ ಗಲ್ಫ್ ದೇಶಗಳ ಪ್ರವಾಸಕ್ಕೆ ಕರೆದೊಯ್ಯುವ ಭರವಸೆಯನ್ನು ನೀಡಿದರು.
'ಉಚಿತ ಪ್ರವಾಸ ಘೋಷಣೆಯ ವಿಷಯವು ನಮ್ಮ ಗಮನಕ್ಕೆ ಬಂದಿದೆ. ಹೆಚ್ಚಿನ ವಿವರ ಸಂಗ್ರಹಿಸಲಾಗುತ್ತಿದೆ. ಪೊಲೀಸ್ ವರಿಷ್ಠಾಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಮಾಹಿತಿ ದೊರೆತ ನಂತರ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುವುದು' ಎಂದು ಜಿಲ್ಲಾಧಿಕಾರಿ ವಿನಯ್ ಗೋಯಲ್ ತಿಳಿಸಿದ್ದಾರೆ.

