ತಿರುವನಂತಪುರ: 'ಕೇರಳದ ಸಹಕಾರಿ ಕ್ಷೇತ್ರದಲ್ಲಿ ₹700 ಕೋಟಿ ಮೊತ್ತದ ಸಾಫ್ಟ್ವೇರ್ ಹಗರಣ ನಡೆದಿದೆ' ಎಂದು ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತಲ ಎಲ್ಡಿಎಫ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
'ರಾಜ್ಯದ 4,415 ಪ್ರಾಥಮಿಕ ಸಹಕಾರ ಸಂಘಗಳಿಗೆ ಸಾಫ್ಟ್ವೇರ್ ಅಳವಡಿಕೆಗಾಗಿ ಈ ಮೊದಲು ಟಿಸಿಎಸ್ ಜತೆಗೆ ₹206 ಕೋಟಿ ಮೊತ್ತದ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಆದರೆ, ಎಲ್ಡಿಎಫ್ ಈ ಕರಾರು ರದ್ದುಪಡಿಸಿ, ಸಾಫ್ಟ್ವೇರ್ ಕ್ಷೇತ್ರಕ್ಕೆ ಯಾವುದೇ ಸಂಬಂಧವಿಲ್ಲದ ಕಣ್ಣೂರಿನ ಎರಡು ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡಿದೆ. ಇವೆರಡೂ ಸಿಪಿಎಂ ನಿಯಂತ್ರಿತ ಕಂಪನಿಗಳು' ಎಂದು ಚೆನ್ನಿತಲ ದೂರಿದರು.
ಸಾಫ್ಟ್ವೇರ್ ಖರೀದಿ ಒಪ್ಪಂದದ ಪರಿಷ್ಕೃತ ಮೊತ್ತವು ₹206 ಕೋಟಿಯಿಂದ ₹915 ಕೋಟಿಗೆ ಏರಿಕೆ ಆಗಿದ್ದು, ರಾಜ್ಯ ಸರ್ಕಾರಕ್ಕೆ ಸುಮಾರು ₹700 ಕೋಟಿಯಷ್ಟು ನಷ್ಟ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.

