ನವದೆಹಲಿ: ಎರಡು ಭಾರತ ಧ್ವಜದ LPG ಟ್ಯಾಂಕರ್ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ದಾಟಿ ಭಾರತದತ್ತ ಸಾಗುತ್ತಿವೆ. ಶಿವಾಲಿಕ್ ಮತ್ತು ನಂದಾದೇವಿ ಎಂಬ ಹಡುಗು ಇವಾಗಿವೆ. ಇರಾನ್ ಮತ್ತು ಆ ಪ್ರದೇಶದಲ್ಲಿನ ಎಲ್ಲಾ ಇತರ ದೇಶಗಳ ಸಹಕಾರದೊಂದಿಗೆ ಇದು ಅತ್ಯಂತ ಎಚ್ಚರಿಕೆಯಿಂದ ನಡೆಸಲಾದ ಕಾರ್ಯಾಚರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಇರಾನ್ ನಾಯಕರುಗಳ ನಡುವೆ ನಡೆದ ಸರಣಿ ಸಮಾಲೋಚನೆಗಳ ನಂತರ ಇದೀಗ ಎರಡು ಹಡಗುಗಳಿಗೆ ಅನುಮತಿ ನೀಡಲಾಗಿದೆ ಎನ್ನಲಾಗಿದೆ.
ಈಗ ಹಾರ್ಮುಜ್ ಜಲಸಂಧಿಯ ಎರಡೂ ಬದಿಗಳಲ್ಲಿ ನೆಲೆಸಿರುವ ಎರಡು ಡಜನ್ಗಿಂತಲೂ ಹೆಚ್ಚು ಭಾರತೀಯ ಧ್ವಜದ ವ್ಯಾಪಾರಿ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಪಡೆಯಲು ಭಾರತವು ಪ್ರಯತ್ನಗಳನ್ನು ತೀವ್ರಗೊಳಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಮಧ್ಯಪ್ರಾಚ್ಯ ಬಿಕ್ಕಟ್ಟಿನ ಆರಂಭದಿಂದಲೂ ಇರಾನ್ ವಿದೇಶಾಂಗ ಸಚಿವ ಸೆಯದ್ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಫೆಬ್ರವರಿ 28, ಮಾರ್ಚ್ 5, ಮಾರ್ಚ್ 10 ಮತ್ತು ಮಾರ್ಚ್ 12 ರಂದು ನಾಲ್ಕು ಬಾರಿ ಫೋನ್ ಕರೆಗಳನ್ನು ಮಾಡಿದ್ದಾರೆ.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಶಿವಾಲಿಕ್ನಲ್ಲಿ ಸರಿಸುಮಾರು 40,000 ಮೆಟ್ರಿಕ್ ಟನ್ಗಳಷ್ಟು ಅನಿಲವನ್ನು ತುಂಬಿಸಲಾಗಿದೆ ಮತ್ತು ನಂದಾ ದೇವಿಯು ಸಹ ದೊಡ್ಡ ಪ್ರಮಾಣದ ತೈಲವನ್ನು ಸಾಗಿಸುವ ಹಡಗು ಆಗಿದೆ.
ಒಮಾನ್ನಿಂದ ಆಫ್ರಿಕಾಕ್ಕೆ ಗ್ಯಾಸೋಲಿಂಗ್ ಸಾಗಿಸುತ್ತಿರುವ ಮತ್ತೊಂದು ಭಾರತೀಯ ಧ್ವಜದ ತೈಲ ಟ್ಯಾಂಕರ್ ಜಗ್ ಪ್ರಕಾಶ್ ಕೂಡ ಹಾರ್ಮುಜ್ ಜಲಸಂಧಿಯ ಪೂರ್ವದಿಂದ ಪ್ರಯಾಣ ಬೆಳೆಸಿದೆ ಎಂದು ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಗಲ್ಫ್ ಪ್ರದೇಶದಲ್ಲಿ ಸುಮಾರು 23,000 ಭಾರತೀಯ ನಾವಿಕರು ವ್ಯಾಪಾರಿ, ಬಂದರು ಮತ್ತು ಕಡಲಾಚೆಯ ಹಡಗುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಪೆಜೆಶ್ಕಿಯಾನ್ ಜೊತೆಗಿನ ಮಾತುಕತೆ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಹೆಚ್ಚುತ್ತಿರುವ ಹಗೆತನ ಮತ್ತು ಜನರ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷತೆ ಮತ್ತು ಭದ್ರತೆ, ಸರಕು ಮತ್ತು ತೈಲ ಸಾಗಣೆಗೆ ಅಡೆತಡೆಯಿಲ್ಲದ ಅಗತ್ಯತೆ ಭಾರತದ ಆದ್ಯತೆಯಾಗಿದೆ ಎಂದು ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

