ನವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೃಷಿ ವಲಯವನ್ನು ರಕ್ಷಿಸುವ ಸಲುವಾಗಿ ರಸಗೊಬ್ಬರ ಸಬ್ಸಿಡಿಯನ್ನು ಶೇ 11ರಷ್ಟು ಹೆಚ್ಚಿಸಿದೆ.
ರಸಗೊಬ್ಬರಗಳಿಗೆ ₹41,532 ಕೋಟಿ ಸಬ್ಸಿಡಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಈ ತಿಂಗಳಿನಿಂದ ಪ್ರಾರಂಭವಾಗುವ ಬೇಸಿಗೆ ಬೆಳೆಗಳ (ಮುಂಗಾರು) ಆರು ತಿಂಗಳ ಅವಧಿಗೆ ಇದು ಅನ್ವಯಿಸುತ್ತದೆ.
ರೈತರಿಗೆ ಬೆಳೆ ಪೋಷಕಾಂಶಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ಬಿಎಸ್) ಅಡಿ ಈ ನಿರ್ಧಾರ ಕೈಗೊಂಡಿದೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಶೇಕಡ 45ಕ್ಕೂ ಹೆಚ್ಚು ಜನರು ಜೀವನೋಪಾಯಕ್ಕಾಗಿ ಕೃಷಿ ವಲಯವನ್ನೇ ಅವಲಂಬಿಸಿದ್ದಾರೆ.
ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ರಸಗೊಬ್ಬರ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವು ಜಾಗತಿಕ ಆಹಾರ ಭದ್ರತೆಗೆ ಬೆಲೆ ಏರಿಕೆ ಮತ್ತು ಕೊರತೆಯ ರೂಪದಲ್ಲಿ ಎರಡು ಪಟ್ಟು ಅಪಾಯ ತಂದೊಡ್ಡಿದೆ ಎಂದು ವಿಶ್ವ ವ್ಯಾಪಾರ ಸಂಸ್ಥೆ ಈಚೆಗೆ ಹೇಳಿತ್ತು.
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದಿಂದಾಗಿ ಹೊರ್ಮುಜ್ ಜಲಸಂಧಿಯ ಮೇಲೆ ಹೇರಲಾದ ನಿರ್ಬಂಧಗಳು ತೈಲ ಮತ್ತು ಅನಿಲದ ಜೊತೆಗೆ ರಸಗೊಬ್ಬರಗಳ ಸಾಗಣೆಗೂ ಅಡ್ಡಿಯುಂಟು ಮಾಡಿತ್ತು. ವಿಶ್ವದ ಒಟ್ಟು ರಸಗೊಬ್ಬರ ಪೂರೈಕೆಯ ಮೂರನೇ ಒಂದು ಭಾಗವು ಈ ಜಲಸಂಧಿಯ ಮೂಲಕವೇ ಸಾಗುತ್ತದೆ. ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ಆಹಾರ ಉತ್ಪಾದನೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

