ಭೋಪಾಲ್: ರಾಜ್ಯದಲ್ಲಿ ಕಳೆದ 14 ತಿಂಗಳುಗಳಲ್ಲಿ (2025ರ ಜನವರಿಯಿಂದ ಈವರೆಗೆ) ಒಟ್ಟು 149 ಚಿರತೆಗಳು ಮೃತಪಟ್ಟಿವೆ. ಈ ಪೈಕಿ ಹೆಚ್ಚಿನ ಸಾವುಗಳಿಗೆ ಅಪಘಾತಗಳೇ ಕಾರಣ ಎಂಬುದು ದತ್ತಾಂಶಗಳಿಂದ ತಿಳಿದುಬಂದಿದೆ. ಸಾಮಾಜಿಕ ಕಾರ್ಯಕರ್ತ ಅಜಯ್ ದುಬೆ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಯಿಂದ ಈ ಮಾಹಿತಿಗಳು ಬಹಿರಂಗಗೊಂಡಿವೆ.
2024ರ ಫೆಬ್ರುವರಿಯಲ್ಲಿ ಬಿಡುಗಡೆಯಾದ 'ಭಾರತದಲ್ಲಿ ಚಿರತೆಗಳ ಸ್ಥಿತಿ 2022'('Sಣಚಿಣus oಜಿ ಐeoಠಿಚಿಡಿಜs iಟಿ Iಟಿಜiಚಿ 2022) ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿ ಅತಿ ಹೆಚ್ಚು ಅಂದರೆ 3,907 ಚಿರತೆಗಳನ್ನು ಹೊಂದಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಇವೆ. 2018ರಲ್ಲಿ ಮಧ್ಯಪ್ರದೇಶದಲ್ಲಿ 3,421 ಚಿರತೆಗಳಿದ್ದವು.
ಅಪಘಾತಗಳೇ ಪ್ರಮುಖ ಕಾರಣ
ಕಳೆದ 14 ತಿಂಗಳಲ್ಲಿ (2025ರ ಜನವರಿಯಿಂದ ಈವರೆಗೆ) ಮಧ್ಯಪ್ರದೇಶದಲ್ಲಿ 149 ಚಿರತೆಗಳು ಮೃತಪಟ್ಟಿವೆ ಎಂದು ಇಲಾಖೆ ಆರ್ಟಿಐಗೆ ನೀಡಿದ ಉತ್ತರದಲ್ಲಿ ತಿಳಿಸಿದೆ. ಇವುಗಳಲ್ಲಿ ಶೇ 31ರಷ್ಟು ಸಾವು ರಸ್ತೆ ಅಪಘಾತಗಳಿಂದಾಗಿ ಸಂಭವಿಸಿವೆ. 19 ಚಿರತೆಗಳು ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತದಿಂದಲೇ ಸಾವಿಗೀಡಾಗಿವೆ ಎಂದು ದತ್ತಾಂಶವು ತೋರಿಸಿದೆ.
ಸಾವಿನ ಪ್ರಮಾಣ
ಶೇ 31: ರಸ್ತೆ ಅಪಘಾತಗಳು (ಇದರಲ್ಲಿ 19 ಸಾವುಗಳು ಹೆದ್ದಾರಿಗಳಲ್ಲಿ ಸಂಭವಿಸಿವೆ).
ಶೇ. 24: ವಯೋಸಹಜ ಸಾವು ಮತ್ತು ಕಾಯಿಲೆಗಳು
ಶೇ. 21: ವನ್ಯಜೀವಿಗಳ ನಡುವಿನ ಸಂಘರ್ಷ.
ಶೇ. 14: ಬೇಟೆ ಮತ್ತು ಪ್ರತೀಕಾರದ ಕೊಲೆ (8 ಚಿರತೆಗಳು ವಿದ್ಯುತ್ ಸ್ಪರ್ಶದಿಂದ ಮತ್ತು 2 ಉರುಳಿನಿಂದ ಮೃತಪಟ್ಟಿವೆ).
ಶೇ. 9: ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಅರಣ್ಯ ಇಲಾಖೆಯ ಕ್ರಮಗಳು:
ರಾಜ್ಯದಲ್ಲಿ ಚಿರತೆಗಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಎಲ್. ಕೃಷ್ಣಮೂರ್ತಿ ಹೇಳಿದ್ದಾರೆ.
ಹೊಸ ರಸ್ತೆಗಳಲ್ಲಿ ಪ್ರಾಣಿಗಳ ಸಂಚಾರಕ್ಕೆ ಮಾರ್ಗಗಳನ್ನು ನಿರ್ಮಿಸುವುದು, ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ನಿಯಮಿತ ಗಸ್ತು ತಿರುಗುವುದು ಸೇರಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜತೆಗೆ ರಸ್ತೆಗಳ ಸಮೀಪ ನೀರಿನ ಮೂಲಗಳನ್ನು ನಿರ್ಮಿಸದಂತೆ ಸಲಹೆ ನೀಡುತ್ತಿದ್ದೇವೆ. ಏಕೆಂದರೆ ಪ್ರಾಣಿಗಳು ನೀರಿಗಾಗಿ ಬಂದು ಅಪಘಾತಕ್ಕೀಡಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಸುಮಾರು 4,000 ಚಿರತೆಗಳಲ್ಲಿ 149 ಸಾವು ಎಂದರೆ ಅದು ಕೇವಲ ಶೇ 4ರಷ್ಟು ಮಾತ್ರ. ವಾರ್ಷಿಕ ಶೇ 10 ರಿಂದ 20ರಷ್ಟು ಮರಣ ಪ್ರಮಾಣ ಸಹಜ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಮತ್ತೊಬ್ಬ ಹಿರಿಯ ಅರಣ್ಯ ಅಧಿಕಾರಿ ಹೇಳಿದ್ದಾರೆ.
ಕಾರ್ಯಕರ್ತರ ಆಕ್ಷೇಪ:
ಮಧ್ಯಪ್ರದೇಶವು ಚಿರತೆಗಳ ಪಾಲಿಗೆ 'ಸ್ಮಶಾನ'ವಾಗಿ ಬದಲಾಗುತ್ತಿದೆ ಎಂದು ಅಜಯ್ ದುಬೆ ಟೀಕಿಸಿದ್ದಾರೆ. ಸುರಕ್ಷಿತ ಕಾರಿಡಾರ್ಗಳ ಕೊರತೆ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ(ಎನ್ಟಿಸಿಎ) ಶಿಷ್ಟಾಚಾರಗಳ ಅನುಷ್ಠಾನದಲ್ಲಿನ ವೈಫಲ್ಯವೇ ಇದಕ್ಕೆ ಕಾರಣ ಎಂದು ಅವರು ದೂರಿದ್ದಾರೆ.

