ಇಂಫಾಲ್: ಮಣಿಪುರದ ಪಶ್ಚಿಮ ಇಂಫಾಲ್ ಜಿಲ್ಲೆಯಲ್ಲಿ ಶನಿವಾರ ನಡೆದ ಪ್ರತಿಭಟನಾ ರ್ಯಾಲಿಯಲ್ಲಿನ ಹಿಂಸಾಚಾರದಲ್ಲಿ ಭಾಗಿಯಾದ ಆರೋಪದ ಮೇಲೆ 21 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದರು.
ಏ.18ರಂದು ನಡೆದ ಹಿಂಸಾಚಾರದಲ್ಲಿ ಭದ್ರತಾ ಪಡೆಗಳ ವಾಹನಗಳಿಗೆ ಕಲ್ಲು ತೂರಾಟ ನಡೆಸಲಾಗಿತ್ತು ಹಾಗೂ ಪೆಟ್ರೋಲ್ ಬಾಂಬ್ ಎಸೆಯಲಾಗಿತ್ತು.
ಈ ವೇಳೆ ವಾಹನಗಳು ಜಖಂಗೊಂಡಿದ್ದು, ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ.
ಬಿಷ್ಣುಪುರ ತ್ರೋಂಗ್ಲಾಬಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಏ.7ರಂದು ಇಬ್ಬರು ಮಕ್ಕಳು ಸಾವಿಗೀಡಾಗಿದ್ದರು. ಈ ದಾಳಿ ಖಂಡಿಸಿ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ 23 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಬಂದ್ ವೇಳೆ ಕಚೇರಿಗೆ ಗೈರಾದ ನೌಕರರ ವಿರುದ್ಧ ಕ್ರಮ: ಬಂದ್ಗೆ ಅವಧಿಯಲ್ಲಿ, ಅಧಿಕೃತವಾಗಿ ರಜೆ ತೆಗೆದುಕೊಳ್ಳದೇ ಕಚೇರಿಗೆ ಗೈರಾದ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ಇಲಾಖೆಗಳ ಮುಖ್ಯಸ್ಥರಿಗೆ ಸರ್ಕಾರ ನಿರ್ದೇಶಿಸಿದೆ.
ಬಾಂಬ್ ದಾಳಿಯನ್ನು ವಿರೋಧಿಸಿ ಮಹಿಳಾ ಸಂಘಟನೆಗಳು ಏ.19ರಿಂದ ಐದು ದಿನ ಪೂರ್ವ ಇಂಫಾಲ್, ಪಶ್ಚಿಮ ಇಂಫಾಲ್, ಬಿಷ್ಣುಪುರ, ಕಾಕ್ಚಿಂಗ್ ಹಾಗೂ ಟೆಂಗ್ನೌಪಾಲ್ ಜಿಲ್ಲೆಗಳಲ್ಲಿ ಬಂದ್ಗೆ ಕರೆ ನೀಡಿವೆ. ಬಂದ್ ನೆಪದಲ್ಲಿ ಕಚೇರಿಗೆ ಬಾರದ ನೌಕರರ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

