ನವದೆಹಲಿ: ಜನ ವಿಶ್ವಾಸ ( ನಿಬಂಧನೆಗಳ ತಿದ್ದುಪಡಿ) ಮಸೂದೆ-2026ಕ್ಕೆ ಸಂಸತ್ತಿನ ಒಪ್ಪಿಗೆ ದೊರೆತ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 'ಬಾಕಿ ಇರುವ, ಗಂಭೀರವಲ್ಲದ 5 ಕೋಟಿ ಪ್ರಕರಣಗಳಿಗೆ ಸಂಬಂಧಿಸಿ ಪುನರ್ ಪರಿಶೀಲನೆ ನಡೆಸಲಾಗುವುದು' ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಶುಕ್ರವಾರ ತಿಳಿಸಿದ್ದಾರೆ.
ಜನವಿಶ್ವಾಸ ಮಸೂದೆ ಮೂಲಕ 79 ಕಾನೂನುಗಳ ಅಡಿಯ 1000ಕ್ಕೂ ಹೆಚ್ಚು ಗಂಭೀರವಲ್ಲದ ಪ್ರಕರಣಗಳನ್ನು ನಿರಪರಾಧೀಕರಣ (ಶಿಕ್ಷೆಯಿಲ್ಲದೆ ದಂಡ ಇತರೆ ಕ್ರಮ) ಎಂದು ಪರಿವರ್ತಿಸಲಾಗಿದೆ. ಈ ಪ್ರಕರಣಗಳು ನ್ಯಾಯಾಲಯಗಳಲ್ಲಿ ಬಾಕಿ ಇದ್ದು, ಹೊಸ ಅವಕಾಶಗಳ ಅಡಿಯಲ್ಲಿ ಅಭಿಯೋಜಕರು ಈ ಪ್ರಕರಣವನ್ನು ಅಂತ್ಯಗೊಳಿಸುವಂತೆ ನ್ಯಾಯಾಲಯಗಳನ್ನು ಕೋರಬಹುದು ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
'ಗಂಭೀರವಲ್ಲದ 5 ಕೋಟಿ ಬಾಕಿ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳು ನ್ಯಾಯಾಲಯವನ್ನೂ ತಲುಪಿಲ್ಲ. ಆಪಾದಿತನನ್ನು ಅಪರಾಧಿ ಎಂದು ನಿರ್ಧರಿಸಿಲ್ಲ' ಎಂದರು.

