ಢಾಕಾ: 2026ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ತೆರಳಲು ನಿರಾಕರಿಸಿದ್ದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಇದೀಗ ಹಳಸಿದ ಸಂಬಂಧವನ್ನು ಸುಧಾರಿಸಲು ಮುಂದಾಗಿ BCCIಗೆ ಪತ್ರ ಬರೆದಿದೆ.
ಭಾರತದಲ್ಲಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ BCB, ತನ್ನ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ಬಳಿ ಮನವಿ ಮಾಡಿತ್ತು.
ಆದರೆ ಐಸಿಸಿ ಆ ಮನವಿಯನ್ನು ತಿರಸ್ಕರಿಸಿ, ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದ ಹೊರಹಾಕಿತ್ತು.
ಈ ಹಿನ್ನೆಲೆಯಲ್ಲಿ ಭಾರತದೊಂದಿಗೆ ಸಂಬಂಧ ಸರಿಪಡಿಸಲು BCB ಮುಂದಾಗಿದೆ.
ಆಗಸ್ಟ್ನಲ್ಲಿ ಭಾರತ ತಂಡವು ಬಾಂಗ್ಲಾದೇಶದಲ್ಲಿ ಟಿ-20 ಹಾಗೂ ಏಕದಿನ ಸರಣಿಗೆ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಭಾರತ ತಂಡ ಪ್ರವಾಸ ನಿರಾಕರಿಸಿತ್ತು. ಇದೀಗ ಈ ಪ್ರಸ್ತಾವನೆಯನ್ನು ಮರುಪರಿಶೀಲಿಸುವಂತೆ BCB ಮನವಿ ಮಾಡಿದೆ ಎಂದು ವರದಿಯಾಗಿದೆ.
2027ರ ಏಕದಿನ ಏಶ್ಯ ಕಪ್ ಆತಿಥ್ಯವನ್ನು ಬಾಂಗ್ಲಾದೇಶ ವಹಿಸಲಿದೆ. ಭಾರತ ತಂಡ ತೆರಳದಿದ್ದರೆ ಪಂದ್ಯಗಳನ್ನು ಶ್ರೀಲಂಕಾ ಅಥವಾ ದುಬೈಗೆ ಸ್ಥಳಾಂತರಿಸುವ ಸಾಧ್ಯತೆ ಇದ್ದು, ಇದು BCBಗೆ ಆರ್ಥಿಕ ಹೊರೆ ತರಲಿದೆ.

