ಇಂಫಾಲ: ನಿರಂತರ ಹಿಂಸಾಚಾರ ಮತ್ತು ಬಂದ್ ನಡುವೆ ಮಣಿಪುರದ ಪ್ರಭಾವಿ ಸಂಘಟನೆಯೊಂದು ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಗೆ ಬಹಿಷ್ಕಾರವನ್ನು ಘೋಷಿಸಿದೆ.
ಇಂಫಾಲ ಕಣಿವೆಯಲ್ಲಿನ ಮೈತೈ ನಾಗರಿಕ ಸಂಘಟನೆಗಳ ಒಕ್ಕೂಟವಾಗಿರುವ ಕೋಆರ್ಡಿನೇಟಿಂಗ್ ಕಮಿಟಿ ಆನ್ ಮಣಿಪುರ ಇಂಟಿಗ್ರಿಟಿ (COCOMI) ಬಿಜೆಪಿ ಅಥವಾ ಅದರ ನಾಯಕರ ಯಾವುದೇ ಕಾರ್ಯಕ್ರಮವನ್ನು ಬಹಿಷ್ಕರಿಸುವಂತೆ ಭಾನುವಾರ ಜನತೆಯನ್ನು ಆಗ್ರಹಿಸಿದೆ.
ನಾಗರಿಕರ ಮೇಲಿನ ದಾಳಿಯನ್ನು ತಡೆಯುವಲ್ಲಿ ತನ್ನ ಸರಕಾರ ಏಕೆ ವಿಫಲಗೊಂಡಿದೆ ಎನ್ನುವುದನ್ನು ವಿವರಿಸಿ ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ಅವರಿಂದ ಹೇಳಿಕೆಗಾಗಿಯೂ ಅದು ಒತ್ತಾಯಿಸಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ COCOMI ನಾಯಕ ಶಾಂತಾ ನಹಕ್ಪಾಮ್ ಅವರು, ಮುಖ್ಯಮಂತ್ರಿಗಳು ಮಣಿಪುರದ ಯಾವುದೇ ಸಮುದಾಯದ ಯಾವುದೇ ನಾಗರಿಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿಲ್ಲ. ಅವರು ನಾರ್ಕೋ-ಭಯೋತ್ಪಾದಕರನ್ನು ಮರೆತಿದ್ದಾರೆ ಮತ್ತು ತನ್ನದೇ ಲೋಕದಲ್ಲಿ ವಿಹರಿಸುತ್ತಿದ್ದಾರೆ. ಉಗ್ರಗಾಮಿಗಳು ಅಮಾಯಕ ಜನರನ್ನು ಕೊಲ್ಲುವ ಮುಖ್ಯ ಅಜೆಂಡಾದೊಂದಿಗೆ ಹಾವಳಿಯೆಬ್ಬಿಸುತ್ತಿದ್ದಾರೆ ಎಂದು ಹೇಳಿದರು.
ನಾರ್ಕೋ-ಭಯೋತ್ಪಾದಕ ಎನ್ನುವುದು ಮಣಿಪುರದ ಕುಕಿಯೇತರ ಸ್ಥಳೀಯ ಸಮುದಾಯಗಳು ಸಶಸ್ತ್ರ ಕುಕಿ-ಝೋ ಗುಂಪುಗಳನ್ನುಉಲ್ಲೇಖಿಸಲು ಬಳಸುವ ಪದವಾಗಿದೆ.
ಸ್ಥಳೀಯ ಜನರ ವಿರುದ್ಧ ಈ ಗುಂಪುಗಳಿಂದ 'ಛಾಯಾ ಯುದ್ಧ'ವನ್ನು ತಡೆಯುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಬಿಜೆಪಿ ವಿಫಲಗೊಂಡಿದೆ ಎಂದೂ ನಹಕ್ಪಾಮ್ ಆರೋಪಿಸಿದರು.
ಮೈತೈ ಮಹಿಳಾ ಗುಂಪುಗಳು ಮತ್ತು ನಾಗರಿಕ ಸಂಘಟನೆಗಳು ಇಂಫಾಲ ಕಣಿವೆಯ ಐದು ಜಿಲ್ಲೆಗಳಾದ್ಯಂತ ಕರೆ ನೀಡಿರುವ ಐದು ದಿನಗಳ ಬಂದ್ನ ಮೊದಲ ದಿನವಾಗಿದ್ದ ರವಿವಾರ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಸಂಜೆ ಬಂದ್ ಅನ್ನು ಏಳು ದಿನಗಳಿಗೆ ವಿಸ್ತರಿಸಲಾಗಿದೆ.
ವಿಷ್ಣುಪುರ ಜಿಲ್ಲೆಯಲ್ಲಿ ಇತ್ತೀಚಿಗೆ ಐದರ ಹರೆಯದ ಬಾಲಕ ಮತ್ತು ಐದು ತಿಂಗಳು ಪ್ರಾಯದ ಹೆಣ್ಣುಮಗುವಿನ ಸಾವಿಗೆ ಕಾರಣವಾಗಿದ್ದ ಬಾಂಬ್ ದಾಳಿಗೆ ಹೊಣೆಗಾರರನ್ನು ಬಂಧಿಸಲು ಅವು ಅಧಿಕಾರಿಗಳಿಗೆ ಎ.25ರ ಗಡುವು ವಿಧಿಸಿವೆ.
ಕುಕಿ ಉಗ್ರರು ಈ ದಾಳಿಯನ್ನು ನಡೆಸಿದ್ದರು ಎಂದು ಆರೋಪಿಸಲಾಗಿದೆ, ಆದರೆ ಕುಕಿ ಸಂಘಟನೆಗಳು ಇದನ್ನು ನಿರಾಕರಿಸಿವೆ.
ಮಣಿಪುರದ ಗೃಹಸಚಿವ ಗೋವಿನ್ದಾಸ ಕೊಂಥುಜಾಮ್ ಅವರು ಬಂದ್ ಅನ್ನು ಹಿಂದೆಗೆದುಕೊಳ್ಳುವಂತೆ ಸಂಘಟನೆಗಳನ್ನು ಕೋರಿದ್ದಾರೆ.
ಇದೇ ವೇಳೆ ಅತ್ತ ಉಖ್ರುಲ್ ಜಿಲ್ಲೆಯಲ್ಲಿ ಇಬ್ಬರು ನಾಗಾ ವ್ಯಕ್ತಿಗಳ ಹತ್ಯೆಗಳನ್ನು ಪ್ರತಿಭಟಿಸಿ ಯುನೈಟೆಡ್ ನಾಗಾ ಕೌನ್ಸಿಲ್ ಕೂಡ ಎ.20ರ ಮಧ್ಯರಾತ್ರಿಯಿಂದ ನಾಗಾಗಳು ವಾಸವಿರುವ ಪ್ರದೇಶಗಳಲ್ಲಿ ಮೂರು ದಿನಗಳ ಬಂದ್ಗೆ ಕರೆ ನೀಡಿದೆ.

