ಪಣಜಿ: ಗೋವಾದ 'ಪೋಷಕ ಸಂತ' ಎಂದೇ ಹೆಸರಾಗಿರುವ ಸೈಂಟ್ ಫ್ರಾನ್ಸಿಸ್ ಝೇವಿಯರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಬಲಪಂಥೀಯ ಕಾರ್ಯಕರ್ತ ಗೌತಮ ಖಟ್ಟರ್ ವಿರುದ್ಧ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸನಾತನ ಮಹಾಸಂಘದ ಸ್ಥಾಪಕರಾಗಿರುವ ಖಟ್ಟರ್ ಶನಿವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೀಡಿಯೊ ವೈರಲ್ ಆದ ಬಳಿಕ ವಿವಾದ ಭುಗಿಲೆದ್ದಿದೆ.
ಸ್ವಾಮಿ ಬ್ರಹ್ಮೇಶಾನಂದ, ರಾಜ್ಯದ ಸಾರಿಗೆ ಸಚಿವ ಮಾವಿನ್ ಗೊಡಿನ್ಹೋ, ಬಿಜೆಪಿ ಶಾಸಕರಾದ ಸಂಕಲ್ಪ ಅಮೋಣಕರ್ ಮತ್ತು ದಾಜಿ ಸಾಲ್ಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಪದಾಧಿಕಾರಿ ಪೀಟರ್ ಡಿಸೋಜಾ ಅವರು ವಾಸ್ಕೋ ಪೋಲಿಸ್ ಠಾಣೆಯಲ್ಲಿ ಖಟ್ಟರ್ ವಿರುದ್ಧ ದೂರು ದಾಖಲಿಸಿದ್ದಾರೆ.
ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ್ದಕ್ಕಾಗಿ ಖಟ್ಟರ್ ವಿರುದ್ಧ ಪ್ರಕರಣ ದಾಖಲಾಗಿದ್ದು,ಕಾನೂನಿನಂತೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ದಕ್ಷಿಣ ಗೋವಾ ಎಸ್ಪಿ ಸಂತೋಷ್ ದೇಸಾಯಿ ಸುದ್ದಿಗಾರರಿಗೆ ತಿಳಿಸಿದರು.
ಕಾಂಗ್ರೆಸ್ ನಾಯಕರು ಖಟ್ಟರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ನಡುವೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಸನಾತನ ಧರ್ಮ ರಕ್ಷಾ ಸಮಿತಿಯು ಖಟ್ಟರ್ ಹೇಳಿಕೆಗಳಿಂದ ಅಂತರವನ್ನು ಕಾಯ್ದುಕೊಂಡಿದೆ ಮತ್ತು ಕ್ರೈಸ್ತರ ಸಾಮರಸ್ಯದ ಸಹಬಾಳ್ವೆಯನ್ನು ಉಲ್ಲೇಖಿಸಿ ಅವರ ಕ್ಷಮೆಯನ್ನು ಕೋರಿದೆ.

