ಹೈದರಾಬಾದ್: ಉಗ್ರರ ಜಾಲಕ್ಕೆ ಮಹಿಳೆಯರನ್ನು ನೇಮಕ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಗುಪ್ತಚರ ದಳದ ಅಧಿಕಾರಿಗಳು ಹೇಳಿದ್ದಾರೆ.
'ಖವಾತೀನ್' ಹೆಸರಿನಲ್ಲಿ ಮಹಿಳಾ ವಿಭಾಗವನ್ನು ಪ್ರಾರಂಭಿಸಲು ಯೋಜಿಸಲಾಗಿತ್ತು. ಈ ಸಂಘಟನೆಯ ನಾಯಕತ್ವವನ್ನು ಹೈದರಾಬಾದ್ನ ಸಯೀದಾ ಬೇಗಂ ವಹಿಸಿಕೊಳ್ಳಬೇಕಿತ್ತು ಎಂದು ತಿಳಿದುಬಂದಿದೆ.
ವಿಜಯವಾಡ ಯುವಕರ ಭಯೋತ್ಪಾದನಾ ನಂಟು ಪ್ರಕರಣದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರು ಈ ಯೋಜನೆ ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಯರನ್ನು ನೇಮಕ ಮಾಡಿ ಭಾರತದಾದ್ಯಂತ ದಾಳಿ ನಡೆಸಲು ಅವರಿಗೆ ಬಂದೂಕುಗಳು, ಸ್ನೈಪರ್ ರೈಫಲ್ಗಳು ಮತ್ತು ಸ್ಫೋಟಕಗಳ ಬಳಕೆಯಲ್ಲಿ ತರಬೇತಿ ನೀಡಲು ಈ ಗುಂಪು ಯೋಜಿಸಿತ್ತು ಎಂದು ವರದಿಯಾಗಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಸಯೀದಾ ಬೇಗಂ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಹಿಳೆಯರನ್ನು ಈ ಜಾಲಕ್ಕೆ ಸೇರಿಸಿಕೊಳ್ಳುವಲ್ಲಿ ಭಯೋತ್ಪಾದಕರಿಗೆ ಅವರು ಸಹಾಯ ಮಾಡಿದ್ದಾರೆ ಎನ್ನಲಾಗಿದೆ.
ಕಳೆದ ತಿಂಗಳು, ಪಾಕಿಸ್ತಾನಿ ಮೂಲದ ಹ್ಯಾಂಡ್ಲರ್ಗಳೊಂದಿಗೆ ಭಯೋತ್ಪಾದಕ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ಗುಪ್ತಚರ ದಳವು ವಿಜಯವಾಡದ ಮೂವರು ಯುವಕರನ್ನು ಅವರ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಆಧಾರದ ಮೇಲೆ ಬಂಧಿಸಿದ್ದರು. ಬಂಧಿತರು ನೀಡಿದ ಮಾಹಿತಿಯ ಮೇರೆಗೆ, ಸಯೀದಾ ಸೇರಿದಂತೆ ಅದೇ ಜಾಲಕ್ಕೆ ಸಂಬಂಧಿಸಿದ ಒಂಬತ್ತು ಶಂಕಿತರನ್ನು ಬಂಧಿಸಲಾಗಿತ್ತು. ಇದರಿಂದಾಗಿ ಆರು ರಾಜ್ಯಗಳ ಬಂಧಿತರ ಸಂಖ್ಯೆಯು 12ಕ್ಕೆ ಏರಿಕೆಯಾಗಿತ್ತು.

