ಕೊಯಮತ್ತೂರು: ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ತಮ್ಮ ದ್ವೇಷ ಮತ್ತು ಕ್ಷುಲ್ಲಕ ರಾಜಕೀಯದಿಂದ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಹಳಿ ತಪ್ಪಿಸಿದವು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಕೊಯಮತ್ತೂರಿನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರ ಪುನರ್ವಿಂಗಡಣೆ ಕುರಿತಂತೆ ತಮಿಳುನಾಡಿನ ಆಡಳಿತ ಪಕ್ಷದ ತೀವ್ರ ವಿರೋಧದ ಬಗ್ಗೆ ವಾಗ್ದಾಳಿ ನಡೆಸಿದರು.
ತಮಿಳುನಾಡಿನಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ ಹೆಚ್ಚಾಗುತ್ತಿತ್ತು, ಆದರೆ, ಡಿಎಂಕೆ ಕೇಂದ್ರ ಸರ್ಕಾರದ ಪ್ರಕ್ರಿಯೆಯನ್ನು ತಡೆದಿದೆ ಎಂದು ಆರೋಪಿಸಿದರು.
'ಇಂದು ನನ್ನ ಜನರ ಮುಂದೆ ನನ್ನ ನೋವು ಮತ್ತು ಕೋಪವನ್ನು ವ್ಯಕ್ತಪಡಿಸಲು ಬಯಸುತ್ತೇನೆ. 2023ರಲ್ಲಿ ನಾವು ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಅಂಗೀಕರಿಸಿದ್ದೆವು. ಈ ತಿಂಗಳ 16ರಂದು, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವತ್ತ ನಾವು ಐತಿಹಾಸಿಕ ಹೆಜ್ಜೆ ಇಟ್ಟಿದ್ದೆವು. ಇದನ್ನು ಬೆಂಬಲಿಸುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ವೈಯಕ್ತಿಕವಾಗಿ ಮನವಿ ಮಾಡಿದ್ದೆ. ನೀವೇ ಇದರ ಕ್ರೆಡಿಟ್ ತೆಗೆದುಕೊಳ್ಳಬಹುದು; ನನಗೆ ಯಾವುದೇ ಆಕ್ಷೇಪವಿಲ್ಲ ಎಂದೂ ಸ್ಪಷ್ಟವಾಗಿ ಹೇಳಿದ್ದೆ. ಸಾಮಾನ್ಯ ಕುಟುಂಬಗಳ ಸಹೋದರಿಯರು ಹೆಚ್ಚಿನ ಸಂಖ್ಯೆಯಲ್ಲಿ ಸಂಸತ್ತು ಮತ್ತು ವಿಧಾನಸಭೆಗಳಿಗೆ ಬರಬೇಕೆಂಬುದು ನಾನು ಬಯಸಿದ್ದೆ.. ಆದರೆ, ದುರದೃಷ್ಟವಶಾತ್, ಈ ಉದಾತ್ತ ಪ್ರಯತ್ನವನ್ನು ಡಿಎಂಕೆ ಮತ್ತು ಕಾಂಗ್ರೆಸ್ ಹಳಿತಪ್ಪಿಸಿವೆ. ಈ ಮಸೂದೆಯನ್ನು ಅವರು ದ್ವೇಷ ಮತ್ತು ಕ್ಷುಲ್ಲಕ ರಾಜಕೀಯದ ಗುರಿಯಾಗಿಸಿಕೊಂಡರು'ಎಂದು ಮೋದಿ ಗುಡುಗಿದ್ದಾರೆ.
ಶುಕ್ರವಾರ ಮಹಿಳಾ ಮೀಸಲಾತಿ ಕಾನೂನಿನ ತಿದ್ದಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿತ್ತು. ಮತದಾನದಲ್ಲಿ ಮೂರನೇ ಎರಡರಷ್ಟು ಬಹುಮತ ಸಿಗಲಿಲ್ಲ. 528 ಸಂಸದರು ಮತ ಚಲವಾಣೆ ಮಾಡಿದ್ದರು. ಮಸೂದೆ ಅಂಗೀಕರಿಸಲು 352 ಮತಗಳ ಅಗತ್ಯವಿತ್ತು. ಆದರೆ, ಮಸೂದೆ ಪರ 298 ಮತ್ತ ಮತ್ತು ವಿರುದ್ಧ 230 ಮತ ಬಿದ್ದಿದ್ದವು.
'ಡಿಎಂಕೆ ಬಳಿ ಹೇಳಿಕೊಳ್ಳಲು ಯಾವುದೇ ಸಾಧನೆಗಳಿಲ್ಲ, ನಮ್ಮ ಬಗ್ಗೆ ಎತ್ತಲು ನಿಜವಾದ ಸಮಸ್ಯೆಗಳಿಲ್ಲ. ಅದಕ್ಕಾಗಿಯೇ ತಮಿಳುನಾಡಿನ ಸ್ಥಾನಗಳಲ್ಲಿ ಕಡಿತವಾಗುತ್ತದೆ ಎಂಬ ಸುಳ್ಳನ್ನು ಹರಡಲು ಪ್ರಾರಂಭಿಸಿದ್ದರು. ಲೋಕಸಭೆಯಲ್ಲಿ ಪ್ರಸ್ತುತ ಇರುವ ತಮಿಳುನಾಡಿನ ಅನುಪಾತದ ಪ್ರಾತಿನಿಧ್ಯವನ್ನು ಕಾಯ್ದುಕೊಳ್ಳಬೇಕು ಎಂದು ಡಿಎಂಕೆ ಈ ಮೊದಲೇ ಹೇಳಿತ್ತು. ನಾವು ಅದನ್ನೇ ಪ್ರಸ್ತಾಪಿಸಿದ್ದೇವು. ಆದರೆ, ಡಿಎಂಕೆ ಉಲ್ಟಾ ಹೊಡೆದಿದೆ' ಎಂದು ಆಕ್ರೋಶ ವ್ಯಕ್ತಪಟಿಸಿದ್ದಾರೆ.

