ಮೀರತ್: ಮರ್ಚೆಂಟ್ ನೇವಿ ಅಧಿಕಾರಿ (Merchant Navy officer) ಸೌರಭ್ ರಜಪೂತ್ ಅವರ ಕೊಲೆ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಮಂಗಳವಾರ ಹಾಜರಾದ ಅವರ ತಾಯಿ ಮಗನನ್ನು ನೆನೆದು ಭಾವುಕರಾಗಿ ಕಣ್ಣೀರು ಸುರಿಸಿದರು.
ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೌರಭ್ ರಜಪೂತ್ ಪತ್ನಿ ಮುಸ್ಕಾನ್ ರಜಪೂತ್ ಅನ್ನು ಗಲ್ಲಿಗೇರಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು. ಸೌರಭ್ ರಜಪೂತ್ ಅವರನ್ನು 2025ರ ಫೆಬ್ರವರಿ 24ರಂದು ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಸೇರಿ ಕೊಂದು ತುಂಡು ಮಾಡಿ ನೀಲಿ ಡ್ರಮ್ನಲ್ಲಿ ಹಾಕಿ ಸಿಮೆಂಟ್ನಿಂದ ಮುಚ್ಚಿದ್ದರು.
ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರ ಕೊಲೆ ಪ್ರಕರಣದ ವಿಚಾರಣೆಯನ್ನು ಆಲಿಸಲು ಉತ್ತರ ಪ್ರದೇಶದ ಮೀರತ್ ಜಿಲ್ಲಾ ನ್ಯಾಯಾಲಯದಲ್ಲಿ ಮಂಗಳವಾರ ಮಧ್ಯಾಹ್ನ ಹಲವಾರು ಮಂದಿ ಸೇರಿದ್ದರು. ಪ್ರಕರಣದ ಪ್ರಮುಖ ಆರೋಪಿ ಮುಸ್ಕಾನ್, ತನ್ನ ಪ್ರೇಮಿ ಸಾಹಿಲ್ ಮತ್ತು ಆರು ತಿಂಗಳ ಮಗಳು ರಾಧಾಳೊಂದಿಗೆ ನ್ಯಾಯಾಲಯಕ್ಕೆ ಹಾಜರಾದಳು. ನ್ಯಾಯಾಲಯದ ಕೋಣೆಯ ಒಂದು ಬದಿಯಲ್ಲಿ ಸೌರಭ್ ಅವರ ತಾಯಿ ರೇಣು ದೇವಿ ಮತ್ತು ಅವರ ಸಹೋದರ ರಾಹುಲ್ ನಿಂತಿದ್ದರು.
ಮುಸ್ಕಾನ್ ಮತ್ತು ಸಾಹಿಲ್ ನ್ಯಾಯಾಲಯದ ಕೋಣೆಗೆ ಕಾಲಿಟ್ಟ ತಕ್ಷಣ ಸೌರಭ್ ಅವರ ತಾಯಿ ದುಃಖ ಕಟ್ಟೆಯೊಡೆಯಿತು. ಅವರು ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದರು. ಮುಸ್ಕಾನ್ ಅವರ ಕುಟುಂಬ ಸದಸ್ಯರು ಕೂಡ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ರೇಣು ದೇವಿ ಆರೋಪಿಸಿದ್ದು, ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಆರೋಪಗಳ ಆಧಾರದಲ್ಲಿ ಆರೋಪಿಗಳ ಬಳಿ ನ್ಯಾಯಾಧೀಶರು 32 ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿದರು. ಸಾಹಿಲ್ ತಮ್ಮ ಪರವಾಗಿ ಸಾಕ್ಷಿಗಳನ್ನು ಹಾಜರುಪಡಿಸಲು ಅನುಮತಿ ಕೋರಿದ್ದು, ಮುಸ್ಕಾನ್ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದಳು.
ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೇಣು ದೇವಿ, ತಮ್ಮ ಮಗನನ್ನು ಕೊಲೆ ಮಾಡಿದವರನ್ನು ಗಲ್ಲಿಗೇರಿಸಬೇಕು. ಮುಸ್ಕಾನ್ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ವಿಫಲರಾಗಿದ್ದಾರೆ. ಅವರು ನನ್ನ ಮಗನನ್ನು ಕೊಂದರು. ಅವನು ಪ್ರತಿ ತಿಂಗಳು 50,000 ರೂ. ಅವರಿಗೆ ನೀಡುತ್ತಿದ್ದನು ಎಂದು ಹೇಳಿದರು.
ಸೌರಭ್ ರಜಪೂತ್ ಮತ್ತು ಮುಸ್ಕಾನ್ ರಸ್ತೋಗಿ 2016ರಲ್ಲಿ ಪ್ರೇಮ ವಿವಾಹವಾಗಿದ್ದರು. ಹೆಂಡತಿಯೊಂದಿಗೆ ಹೆಚ್ಚು ಸಮಯ ಕಳೆಯುವ ಉತ್ಸಾಹದಿಂದ ಸೌರಭ್ ಮರ್ಚೆಂಟ್ ನೇವಿ ಕೆಲಸವನ್ನು ತೊರೆದಿದ್ದರು. ಇದು ಅವರ ಕುಟುಂಬಕ್ಕೆ ಇಷ್ಟವಾಗಿರಲಿಲ್ಲ. ಇದರಿಂದ ಮನೆಯಲ್ಲಿ ಗಲಾಟೆ ಕೂಡ ನಡೆದಿತ್ತು. ಹೀಗಾಗಿ ಸೌರಭ್ ತನ್ನ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದರು.
ಮುಸ್ಕಾನ್ ಮತ್ತು ಸೌರಭ್ಗೆ ಮಗಳಿದ್ದಳು. 2019ರಲ್ಲಿ, ತನ್ನ ಸ್ನೇಹಿತ ಸಾಹಿಲ್ ಜೊತೆಗೆ ಮುಸ್ಕಾನ್ ಸಂಬಂಧವಿಟ್ಟುಕೊಂಡಿರುವುದು ತಿಳಿದ ಬಳಿಕ ಕುಟುಂಬದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ದಂಪತಿ ವಿಚ್ಛೇದನ ಪಡೆಯಲು ನಿರ್ಧರಿಸಿದರು. ಸೌರಭ್ ಮತ್ತೆ ಮರ್ಚೆಂಟ್ ನೇವಿಗೆ ಸೇರಲು ನಿರ್ಧರಿಸಿದ್ದು, 2023ರಲ್ಲಿ ಆತ ಕೆಲಸಕ್ಕಾಗಿ ದೇಶವನ್ನು ತೊರೆದನು.
2025ರ ಫೆಬ್ರವರಿ 24ರಂದು ಸೌರಭ್ ಮಗಳ ಆರನೇ ಹುಟ್ಟುಹಬ್ಬದ ಆಚರಣೆಗಾಗಿ ಮನೆಗೆ ಮರಳಿದ್ದು, ಆಗಲೇ ಆತನ ಹೆಂಡತಿ ಮತ್ತು ಸ್ನೇಹಿತ ಅವನ ಕೊಲೆಗೆ ಯೋಜನೆ ಹಾಕಿಕೊಂಡಿದ್ದರು. ಮಾರ್ಚ್ 4 ರಂದು ಮುಸ್ಕಾನ್ ಸೌರಭ್ನ ಆಹಾರದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಕೊಟ್ಟಳು. ಸಾಹಿಲ್ ಆತನನ್ನು ಕೊಚ್ಚಿ ಹಾಕಿ ಡ್ರಮ್ನಲ್ಲಿ ತುಂಬಿಸಿ ಸಿಮೆಂಟಿನಿಂದ ಮುಚ್ಚಿದರು. ಅನಂತರ ದೇಹವನ್ನು ವಿಲೇವಾರಿ ಮಾಡುವ ಯೋಜನೆ ಹಾಕಿಕೊಂಡು ಅದರಂತೆ ಮಾಡಿದರು.

