ಇಸ್ಲಾಮಾಬಾದ್: ಅಮೆರಿಕದೊಂದಿಗೆ ಶಾಂತಿ ಮಾತುಕತೆ ನಡೆಸಲು ಪಾಕಿಸ್ತಾನಕ್ಕೆ ತೆರಳಿದ ನಿಯೋಗವು ಇರಾನ್ನ 'ಮಿನಾಬ್ 168' ವಿಮಾನದಲ್ಲಿ ಫೆಬ್ರವರಿ 28ರಂದು ಯುಎಸ್-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಇರಾನಿನ ಶಾಲಾ ಮಕ್ಕಳ ಫೋಟೊ, ಬ್ಯಾಗ್ ಅನ್ನು ಕೊಂಡೊಯ್ದಿದ್ದಾರೆ.
ಇದು ವ್ಯಾಪಕವಾಗಿ ಗಮನಸೆಳೆದಿದೆ.
ಯುದ್ಧದ ಮೊದಲ ದಿನ ಮಿನಾಬ್ ಪ್ರದೇಶದ ಶಾಲೆಯ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 168 ಮಂದಿ ಮೃತಪಟ್ಟಿದ್ದು, ಇವರಲ್ಲಿ ಬಹುತೇಕರು ಮಕ್ಕಳು ಎಂದು ಇರಾನಿನ ಮೂಲಗಳು ತಿಳಿಸಿವೆ. ಈ ದಾಳಿ ಶಾಂತಿ ಮಾತುಕತೆಗಳ ಹಿನ್ನೆಲೆಯಲ್ಲೇ ಭಾವನಾತ್ಮಕ ಮತ್ತು ರಾಜಕೀಯ ಪ್ರಭಾವವನ್ನು ಹೆಚ್ಚಿಸಿದೆ.
ಇದರ ನಡುವೆ, ಇರಾನ್ ಸಂಸತ್ತಿನ ಸ್ಪೀಕರ್ ಮುಹಮ್ಮದ್-ಬಾಘರ್ ಘಾಲಿಬಾಫ್ ನೇತೃತ್ವದ ಉನ್ನತ ಮಟ್ಟದ ಸಂಧಾನ ನಿಯೋಗ ಶುಕ್ರವಾರ ಇಸ್ಲಾಮಾಬಾದ್ ಗೆ ಆಗಮಿಸಿದೆ ಎಂದು ಇರಾನಿನ ಮಾಧ್ಯಮಗಳು ವರದಿ ಮಾಡಿವೆ. ಅಮೆರಿಕವು ಟೆಹ್ರಾನ್ ಸೂಚಿಸಿರುವ 'ಪೂರ್ವಭಾವಿ ಷರತ್ತುಗಳನ್ನು' ಒಪ್ಪಿಕೊಂಡರೆ ಮಾತ್ರ ಮಾತುಕತೆಗಳು ಪ್ರಾರಂಭವಾಗಲಿವೆ ಎಂದು ನಿಯೋಗ ಸ್ಪಷ್ಟಪಡಿಸಿದೆ.
ನಿಯೋಗದಲ್ಲಿ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಸುಪ್ರೀಂ ರಾಷ್ಟ್ರೀಯ ರಕ್ಷಣಾ ಮಂಡಳಿಯ ಕಾರ್ಯದರ್ಶಿ ಅಲಿ ಅಕ್ಬರ್ ಅಹ್ಮದಿಯನ್, ಕೇಂದ್ರ ಬ್ಯಾಂಕ್ ಗವರ್ನರ್ ಅಬ್ದೋಲ್ನಾಸರ್ ಹೆಮ್ಮತಿ, Iಖಉಅ ಮಾಜಿ ಕಮಾಂಡರ್ ಮೊಹಮ್ಮದ್ ಬಘರ್ ಜೊಲ್ಘಾದರ್ ಸೇರಿದಂತೆ ಹಿರಿಯ ರಾಜಕೀಯ, ಮಿಲಿಟರಿ ಮತ್ತು ಆರ್ಥಿಕ ಅಧಿಕಾರಿಗಳು ಸೇರಿದ್ದಾರೆ. ಸಂಸತ್ತಿನ ಹಲವಾರು ಸದಸ್ಯರೂ ನಿಯೋಗದಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ ಈ ಮಾತುಕತೆಗಳು ಅಮೆರಿಕ ಮತ್ತು ಇರಾನ್ ಅಧಿಕಾರಿಗಳ ನಡುವಿನ ಬಹು ನಿರೀಕ್ಷಿತ ಮುಖಾಮುಖಿ ಚರ್ಚೆಗಳಿಗೆ ಮುನ್ನೋಟವಾಗಿವೆ. ದುರ್ಬಲ ಕದನ ವಿರಾಮ ಪರಿಸ್ಥಿತಿ ಹಾಗೂ ದೀರ್ಘಕಾಲದ ಅಪನಂಬಿಕೆಯ ನಡುವೆಯೇ ಪಾಕಿಸ್ತಾನ ಈ ಮಹತ್ವದ ಸಭೆಯನ್ನು ಆಯೋಜಿಸಿದೆ.
ಮಾತುಕತೆ ಆರಂಭಕ್ಕೂ ಮುನ್ನ ಕೆಲವು ಪ್ರಮುಖ ಷರತ್ತುಗಳನ್ನು ಪೂರೈಸಬೇಕು ಎಂದು ಟೆಹ್ರಾನ್ ಪದೇ ಪದೇ ಒತ್ತಿಹೇಳಿದೆ. ಪ್ರಾದೇಶಿಕ ಭದ್ರತೆ, ಆರ್ಥಿಕ ನಿರ್ಬಂಧಗಳ ಸಡಿಲಿಕೆ ಸೇರಿದಂತೆ ಹಲವು ವಿಷಯಗಳು ಈ ಷರತ್ತುಗಳಲ್ಲಿ ಸೇರಿವೆ. ಸಂವಾದಕ್ಕೆ ಸಿದ್ಧತೆಯಿದ್ದರೂ ದೃಢ ನಿಲುವನ್ನು ಇರಾನ್ ಮುಂದುವರಿಸುತ್ತಿರುವುದನ್ನು ಇದು ಸೂಚಿಸುತ್ತದೆ.
ಇದಲ್ಲದೆ, ಯಾವುದೇ ಕದನ ವಿರಾಮ ಒಪ್ಪಂದವು ಲೆಬನಾನ್ ನಲ್ಲಿ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗಳನ್ನು ಒಳಗೊಂಡಿರಬೇಕು ಹಾಗೂ ನಿರ್ಬಂಧಗಳ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ಇರಾನಿನ ಆಸ್ತಿಗಳ ಬಿಡುಗಡೆಗೂ ಅವಕಾಶ ಕಲ್ಪಿಸಬೇಕು ಎಂದು ಘಾಲಿಬಾಫ್ ಮತ್ತು ಅರಾಘ್ಚಿ ಒತ್ತಾಯಿಸಿದ್ದಾರೆ.

