ಕೊಚ್ಚಿ: ಆರತಿ ಆರ್ ಮೆನನ್.. 2025ರ ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ 26 ಪ್ರವಾಸಿಗರ ಪೈಕಿ ಒಬ್ಬರಾದ ಎನ್. ರಾಮಚಂದ್ರನ್ ಅವರ ಪುತ್ರಿ. ದಾಳಿಗೆ ಇಂದು ವರ್ಷ ತುಂಬಿದೆ. ಈ ಸಂದರ್ಭ ಮಾತನಾಡಿದ ಅವರು, ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಆಪರೇಷನ್ ಸಿಂದೂರ ಮೂಲಕ ಕೊಟ್ಟ ಪ್ರತಿಕ್ರಿಯೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಎಡಪ್ಲಿಯಲ್ಲಿ ತನ್ನ ತಂದೆಯ ಸ್ಮರಣಾರ್ಥ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಹಲ್ಗಾಮ್ ಘಟನೆಯು ದೇಶದಾದ್ಯಂತ ಗಲಭೆಗಳನ್ನು ಹುಟ್ಟುಹಾಕುವ ಮೂಲಕ ಭಾರತವನ್ನು ವಿಭಜಿಸುವ ಗುರಿಯನ್ನು ಹೊಂದಿದ್ದ ಹಿಂದೂಗಳನ್ನೇ ಗುರಿಯಾಗಿಸಿಕೊಂಡು ನಡೆಸಿದ ಭಯೋತ್ಪಾದಕ ದಾಳಿಯಾಗಿತ್ತು. ಆದರೆ, ನಾವು ಇನ್ನೂ ಬಲವಾಗಿ ಮತ್ತು ಒಗ್ಗಟ್ಟಿನಿಂದ ನಿಂತಿದ್ದೇವೆ ಎಂಬುದು ನಮ್ಮ ಉತ್ತರ. ಒಂದು ವರ್ಷದ ನಂತರವೂ ನಾವು ಒಗ್ಗಟ್ಟಿನಿಂದ ಇದ್ದೇವೆ. ಉಗ್ರರ ದಾಳಿಗೆ ಭಾರತ ಬಲವಾದ ಉತ್ತರ ನೀಡಿದೆ ಎಂದು ನನಗೆ ಅನಿಸುತ್ತದೆ. ಜಗತ್ತಿಗೂ ಇದರ ಬಗ್ಗೆ ತಿಳಿದಿದೆ' ಎಂದು ಅವರು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ತನ್ನ ಪತ್ನಿ, ಮಗಳು ಮತ್ತು ಮೊಮ್ಮಕ್ಕಳೊಂದಿಗೆ ರಜೆಯಲ್ಲಿದ್ದ ರಾಮಚಂದ್ರನ್(65) ಅವರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದರು. ಇದು ದೇಶದಾದ್ಯಂತ ಆಘಾತಕಾರಿ ವಾತಾವರಣ ಸೃಷ್ಟಿಸಿತ್ತು.
ಬಳಿಕ, ಪಾಕಿಸ್ತಾನದಲ್ಲಿನ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತವು ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿತು.
ತನ್ನ ತಂದೆಯ ಹತ್ಯೆಯನ್ನು ಕಣ್ಣಾರೆ ಕಂಡಿದ್ದ ಮೆನನ್, ಭಾರತವು ಭಯೋತ್ಪಾದನೆಗೆ ಯಾವಾಗಲೂ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಕಾಯ್ದುಕೊಂಡಿದೆ. ದಾಳಿಗಳಿಂದ ಭಾರತವನ್ನು ರಕ್ತಸಿಕ್ತಗೋಲಿಸುವ ಪಾಕಿಸ್ತಾನದ ಪ್ರಯತ್ನ ವಿಫಲವಾಗಿದೆ ಎಂದು ಹೇಳಿದ್ದಾರೆ.
'ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಪರೇಷನ್ ಸಿಂದೂರ ಮತ್ತು ಆಪರೇಷನ್ ಮಹಾದೇವ ಮೂಲಕ ಭಾರತ ನೀಡಿದ ಉತ್ತರಕ್ಕಾಗಿ ನಾನು ಹೆಮ್ಮೆಯ ಭಾರತೀಯಳಾಗಿ ಇಲ್ಲಿ ನಿಂತಿದ್ದೇನೆ'ಎಂದು ಅವರು ಹೇಳಿದ್ದಾರೆ.

