ತ್ರಿಶೂರ್ನ ಕೊಡಾಲಿಯಲ್ಲಿ ಹಾವು ಕಚ್ಚಿ 8 ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಈಗ ಒಂದು ಮಹತ್ವದ ತಿರುವು ಸಿಕ್ಕಿದೆ. ಮಗುವಿನ ಸಾವಿಗೆ ವಿಷಕಾರಿ ಕಟ್ಟಾವು ಹಾವಿನ (Common Krait) ಕಡಿತವೇ ಕಾರಣ ಅಂತ ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿದೆ.
ತ್ರಿಶೂರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪೋಸ್ಟ್ಮಾರ್ಟಂನಲ್ಲಿ ಈ ಸತ್ಯಾಂಶ ಹೊರಬಿದ್ದಿದೆ. ಈ ಮೂಲಕ, ಫುಡ್ ಪಾಯ್ಸನಿಂಗ್ನಿಂದ ಮಗು ಸತ್ತಿರಬಹುದು ಎಂಬ ಪೊಲೀಸರ ಆರಂಭಿಕ ವರದಿಯನ್ನು ಫೋರೆನ್ಸಿಕ್ ಸರ್ಜನ್ ತಳ್ಳಿಹಾಕಿದ್ದಾರೆ.

ಮೃತ ಬಾಲಕ ಆಲ್ಜೋನ ಅಂತ್ಯಕ್ರಿಯೆ ಇಂದು ಸಂಜೆ 3 ಗಂಟೆಗೆ ತ್ರಿಶೂರ್ನ ಕೊಡುಂಗಪಳ್ಳಿಯಲ್ಲಿ ನಡೆಯಲಿದೆ. ಹಾವು ಕಡಿತದಿಂದ ಗಂಭೀರವಾಗಿ ಅಸ್ವಸ್ಥನಾಗಿರುವ ಆಲ್ಜೋನ 10 ವರ್ಷದ ಸಫೋದರ ಅನೋಜ್, ಐಸಿಯುನಲ್ಲಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಭಾನುವಾರ ಬೆಳಗ್ಗೆ ಮಕ್ಕಳು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಪೋಷಕರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ಥಳೀಯರು ಅನುಮಾನಗೊಂಡು ಮನೆಯಲ್ಲಿ ಹುಡುಕಾಡಿದಾಗ, ಮಕ್ಕಳ ಮಲಗುವ ಕೋಣೆಯಲ್ಲೇ ಕಟ್ಟಾವು ಹಾವು ಪತ್ತೆಯಾಗಿತ್ತು. (ಸಾಂದರ್ಭಿಕ ಚಿತ್ರ)

ಘಟನೆ ನಡೆದ ರಾತ್ರಿ, ಮಕ್ಕಳಿಬ್ಬರೂ ತಾಯಿಯ ಜೊತೆ ಮಲಗಿದ್ದರು. ಬೆಳಗಿನ ಜಾವ ಸುಮಾರ 2 ಗಂಟೆ ಸುಮಾರಿಗೆ ಇಬ್ಬರಿಗೂ ಹೊಟ್ಟೆನೋವು ಮತ್ತು ಸುಸ್ತು ಕಾಣಿಸಿಕೊಂಡಿದೆ. ರಾತ್ರಿ ತಿಂದ ಊಟ ಸರಿ ಹೋಗಿಲ್ಲವೇನೋ ಅಂತ ಪೋಷಕರು ಮೊದಲು ಅಂದುಕೊಂಡಿದ್ದರು. (ಸಾಂದರ್ಭಿಕ ಚಿತ್ರ)

ನಂತರ ಮಕ್ಕಳ ಬಾಯಲ್ಲಿ ನೊರೆ ಬರಲು ಶುರುವಾದಾಗ, ಆತಂಕಗೊಂಡ ಪೋಷಕರು ಬೆಳಗ್ಗೆ 5 ಗಂಟೆಗೆ ಇಬ್ಬರನ್ನು ಚಾಲಕುಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಹಾವು ಕಡಿತದ ಬಗ್ಗೆ ಖಚಿತಪಡಿಸಿದ್ದಾರೆ. ಆದರೆ ಆಸ್ಪತ್ರೆ ತಲುಪಿದ ಕೆಲವೇ ನಿಮಿಷಗಳಲ್ಲಿ ಆಲ್ಜೋ ಪ್ರಾಣ ಬಿಟ್ಟಿದ್ದ. (ಸಾಂದರ್ಭಿಕ ಚಿತ್ರ)

ಆಲ್ಜೋ ಮನೆ ರಬ್ಬರ್ ಮರಗಳ ತೋಟದ ಮಧ್ಯದಲ್ಲಿದೆ. ಈ ಪ್ರದೇಶದಲ್ಲಿ ಕಟ್ಟಾವು ಹಾವುಗಳು ಹೆಚ್ಚಾಗಿ ಕಾಣಸಿಗುತ್ತವೆ ಎಂದು ಸ್ಥಳೀಯರು ಹೇಳುತ್ತಾರೆ. ಮನೆಯ ಪಕ್ಕದಲ್ಲೇ ಇಟ್ಟಿದ್ದ ಸೌದೆ ರಾಶಿ ಮತ್ತು ಗೋಡೆ ಹಬ್ಬಿದ್ದ ಬಳ್ಳಿಗಳ ಮೂಲಕ ಹಾವು ಮನೆಯೊಳಗೆ ಬಂದಿರಬಹುದು ಎಂದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಹೊಡೆದು ಕೊಂದಿದ್ದ ಹಾವನ್ನು ಅರಣ್ಯ ಇಲಾಖೆಯವರು ಪರೀಕ್ಷೆಗಾಗಿ ತೆಗೆದುಕೊಂಡು ಹೋಗಿದ್ದಾರೆ. (ಸಾಂದರ್ಭಿಕ ಚಿತ್ರ)

