ಚೆನ್ನೈ: ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಎರಡು ತಿಂಗಳಲ್ಲಿ ತಮಿಳುನಾಡಿಗೆ ಭೇಟಿ ನೀಡಿ ಬಿಜೆಪಿ ಹಾಗೂ ಮಿತ್ರಪಕ್ಷಗಳ ಪರ ಪ್ರಚಾರ ನಡೆಸಿದ್ದಾರೆ; ಈ ತಿಂಗಳ 15ರಂದು ಮತ್ತೆ ಭೇಟಿ ನೀಡಲಿದ್ದು, ನಾಗರಕೋಯಿಲ್ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಪರ ಮತ ಯಾಚನೆಗೆ ವೇದಿಕೆ ಸಜ್ಜಾಗಿದೆ.
ಇದಕ್ಕೆ ವಿರುದ್ಧವಾಗಿ ರಾಹುಲ್ ಗಾಂಧಿ ಒಂದು ಬಾರಿ ಕೂಡಾ ರಾಜ್ಯಕ್ಕೆ ಭೇಟಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ರಾಹುಲ್ ಗಾಂಧಿ ಅನುಪಸ್ಥಿತಿಯಿಂದಾಗಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವ ಅನುಮಾನ ದಟ್ಟವಾಗಿ ಮೂಡಿದೆ. 2021ರ ಜನವರಿಯಲ್ಲಿ ರಾಹುಲ್ ಗಾಂಧಿಯವರು ಮೂರು ದಿನಗಳ ಪ್ರವಾಸದೊಂದಿಗೆ ಮೈತ್ರಿಕೂಟದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದನ್ನು ರಾಜಕೀಯ ವಿಶ್ಲೇಷಕರು ಉಲ್ಲೇಖಿಸುತ್ತಾರೆ.
ರಾಹುಲ್ ಅವರ ಪ್ರಚಾರ ವೇಳಾಪಟ್ಟಿ ಇನ್ನಷ್ಟೇ ಸಿದ್ಧವಾಗಬೇಕಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂಡರು ಹೇಳುತ್ತಾರೆ. ಆದರೆ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಅಸ್ಸಾಂ, ಕೇರಳ ಹಾಗೂ ಪುದುಚೇರಿಯಲ್ಲಿ ಮೊದಲ ಹಂತದ ಚುನಾವಣೆ ನಡೆದ ಬಳಿಕ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
ಚುನಾವಣಾ ಪ್ರಚಾರ ಮುಕ್ತಾಯಕ್ಕೆ ಒಂದು ದಿನ ಮೊದಲು ಅಂದರೆ ಸೋಮವಾರ ಪುದುಚೇರಿಗೆ ರಾಹುಲ್ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಆದರೆ ಜಾಣ್ಮೆಯಿಂದ ಮಿತ್ರಪಕ್ಷವಾದ ಡಿಎಂಕೆ ಅಥವಾ ಮುಖ್ಯಸ್ಥ ಎಂ.ಕೆ.ಸ್ವಾಲಿನ್ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ.
ಸ್ಟಾಲಿನ್ ಕೂಡಾ ಅದೇ ದಿನ ಪುದುಚೇರಿಗೆ ಭೇಟಿ ನೀಡಿದ್ದರೂ, ಉಭಯ ಮುಖಂಡರು ಒಂದೆಡೆ ಪ್ರಚಾರಸಭೆಯಲ್ಲಿ ಪಾಲ್ಗೊಳ್ಳದ ರೀತಿಯಲ್ಲಿ ಚುನಾವಣಾ ಪ್ರಚಾರ ವ್ಯವಸ್ಥೆಯಾಗಿತ್ತು. ಬೆಳಿಗ್ಗೆ ರಾಹುಲ್ ಭೇಟಿ ನೀಡಿದರೆ, ಮಧ್ಯಾಹ್ನದ ಬಳಿಕ ಸ್ಟಾಲಿನ್ ಪ್ರಚಾರ ಕೈಗೊಂಡಿದ್ದರು.
ರಾಹುಲ್ ಎಂದೂ ಸ್ಟಾಲಿನ್ ಹೆಸರು ಉಲ್ಲೇಖಿಸಿಲ್ಲ ಎಂದು ಡಿಎಂಕೆ ಮುಖಂಡರು ಹೇಳಿದ್ದಾರೆ. ಅದೇ ವೇಳೆ ಸ್ಟಾಲಿನ್ ಕೂಡಾ ಕಾಂಗ್ರೆಸ್ ಮುಖಂಡರ ಹೆಸರು ಪ್ರಸ್ತಾಪಿಸಿಲ್ಲ ಎಂದು ರಾಜಕೀಯ ವಿಶ್ಲೇಷಕರು ಸ್ಪಷ್ಟಪಡಿಸಿದ್ದಾರೆ. ಸ್ಥಾನ ಹೊಂದಾಣಿಕೆ ಮಾತುಕತೆ ವೇಳೆ ಉಭಯ ಪಕ್ಷಗಳ ಮುಖಂಡರ ನಡುವೆ ನಡೆದ ಸಂಘರ್ಷ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

