ಪೆಶಾವರ: ರಾಜತಾಂತ್ರಿಕತೆಯ ಮೂಲಕ ಪ್ರಾದೇಶಿಕ ಉದ್ವಿಗ್ನತೆಯನ್ನು ಶಮನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಶಿಫಾರಸು ಮಾಡುವ ನಿರ್ಣಯವನ್ನು ಮಂಗಳವಾರ ಖೈಬರ್ ಪಖ್ತುನ್ಖ್ವಾ ಅಸೆಂಬ್ಲಿಯಲ್ಲಿ ಮಂಡಿಸಲಾಗಿದೆ.
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಶಾಸಕಿ ಫರಾ ಖಾನ್ ಅವರು ಈ ನಿರ್ಣಯವನ್ನು ಮಂಡಿಸಿದ್ದಾರೆ.
ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಪಾಕಿಸ್ತಾನದ ಜವಾಬ್ದಾರಿಯುತ, ವಿವೇಕಯುತ ಮತ್ತು ಸಕ್ರಿಯ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಯನ್ನು ಈ ನಿರ್ಣಯವು ಶ್ಲಾಘಿಸಿದೆ.
ಶರೀಫ್ ಮತ್ತು ಮುನೀರ್ ಅವರ ನಾಯಕತ್ವವನ್ನು ಶ್ಲಾಘಿಸಿರುವ ಈ ನಿರ್ಣಯವು, ಅವರ ದೂರದರ್ಶಿತ್ವದ ನಾಯಕತ್ವ, ಕಾರ್ಯತಂತ್ರದ ದೂರದೃಷ್ಟಿ ಮತ್ತು ಅವಿರತ ರಾಜತಾಂತ್ರಿಕ ಪ್ರಯತ್ನಗಳನ್ನು ಎತ್ತಿ ತೋರಿಸಿದೆ.
ಪಾಕಿಸ್ತಾನವು ತನ್ನ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸಿಕೊಂಡಿದೆ ಮತ್ತು ಜವಾಬ್ದಾರಿಯುತ, ಶಾಂತಿ ಬಯಸುವ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯಲು ಕಾರಣವಾಗಿದೆ ಎಂದು ನಿರ್ಣಯದಲ್ಲಿ ಪ್ರತಿಪಾದಿಸಲಾಗಿದೆ. ಅಲ್ಲದೆ, ದೇಶದ ಪ್ರಯತ್ನಗಳು ಸಂಭವನೀಯ ಜಾಗತಿಕ ಬಿಕ್ಕಟ್ಟನ್ನು ತಪ್ಪಿಸಲು ಮತ್ತು ಜಾಗತಿಕ ಆರ್ಥಿಕತೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಿದೆ ಎಂದು ತಿಳಿಸಲಾಗಿದೆ.
ಶಾಂತಿಗಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಶೆಹಬಾಜ್ ಶರೀಫ್ ಮತ್ತು ಅಸೀಮ್ ಮುನೀರ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಅಧಿಕೃತವಾಗಿ ಶಿಫಾರಸು ಮಾಡುವ ಮೂಲಕ ನಿರ್ಣಯವು ಮುಕ್ತಾಯಗೊಂಡಿದೆ.
ಏತನ್ಮಧ್ಯೆ, ಸದನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಬಹುಮತ ಹೊಂದಿರುವುದರಿಂದ ಈ ನಿರ್ಣಯವನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಮಂಡನೆಯಾದರೂ ಅಂಗೀಕಾರಗೊಳ್ಳುವುದು ಅನುಮಾನ ಎನ್ನಲಾಗಿದೆ.
ಸೇನಾ ಮುಖ್ಯಸ್ಥರಾಗಿ ಅಸೀಮ್ ಮುನೀರ್ ಅವರನ್ನು ನೇಮಕ ಮಾಡುವುದನ್ನು ಈ ಹಿಂದೆ ಇಮ್ರಾನ್ ಖಾನ್ ಬಲವಾಗಿ ವಿರೋಧಿಸಿದ್ದರು.
ಇದಕ್ಕೂ ಮೊದಲು ಏ. 16ರಂದು ಶೆರೀಫ್ ಮತ್ತು ಮುನೀರ್ ಅವರ ಹೆಸರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ಶಿಫಾರಸು ಮಾಡುವ ನಿರ್ಣಯವನ್ನು ಪಂಜಾಬ್ ಅಸೆಂಬ್ಲಿ ಸರ್ವಾನುಮತದಿಂದ ಅಂಗೀಕರಿಸಿತ್ತು.

