ABP ನ್ಯೂಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು 'ಯುದ್ಧ ಅಪರಾಧಿಗಳು' ಎಂದು ಕರೆದಿದ್ದಾರೆ.
"ನಾನು ಅವರನ್ನು ಮಾನವೀಯತೆಯ ವಿರುದ್ಧದ ಅಪರಾಧಿಗಳು; ಪ್ರಕೃತಿ ಮತ್ತು ಪರಿಸರದ ವಿರುದ್ಧದ ಅಪರಾಧಿಗಳು ಎಂದು ಪರಿಗಣಿಸುತ್ತೇನೆ," ಎಂದು ಹೇಳಿದ್ದಾರೆ.
ಚರ್ಚೆಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಲಿ ಖಾಮಿನೈ ಹತ್ಯೆಯ ಕುರಿತು ಪ್ರಶ್ನೆ ಕೇಳಿದಾಗ ಪ್ರತಿಕ್ರಿಯಿಸಿದ ರಾಮದೇವ್, "ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದು. ಆದರೆ ಅವರ ವಿಚಾರಗಳು, ತತ್ವಗಳು, ಮನೋಭಾವ ಮತ್ತು ಆತ್ಮವನ್ನು ಕೊಲ್ಲಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತವು ಇಸ್ರೇಲ್ ಪರ ನಿಲ್ಲಬೇಕೇ ಅಥವಾ ಇರಾನ್ ಪರವಾಗಿರಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಮದೇವ್, ಇರಾನ್ ಕುರಿತು ಮಾತನಾಡಿದ ಅವರು, "ನನಗೆ ಇರಾನ್ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಇವರು ಪ್ರವಾದಿ ಮುಹಮ್ಮದ್ ಅವರ ವಂಶಕ್ಕೆ ಸೇರಿದವರು. ಶಿಯಾ ಸಮುದಾಯದವರು. ಅವರನ್ನು ಯಾರೂ ತಲೆಬಾಗಿಸಲು ಅಥವಾ ಸಂಪೂರ್ಣವಾಗಿ ಸೋಲಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ.
ಟ್ರಂಪ್ ಮತ್ತು ನೆತನ್ಯಾಹು ಕುರಿತು ಮತ್ತಷ್ಟು ಟೀಕೆ ಮಾಡಿದ ಅವರು, "ಇಬ್ಬರೂ ಒಂದೇ ಸ್ವಭಾವದವರು ಎಂಬ ಗಾದೆ ಇದೆ. ನಾನು ಯಾರನ್ನೂ ನೇರವಾಗಿ ಕಳ್ಳ ಎಂದು ಕರೆಯುವುದಿಲ್ಲ; ಆದರೆ 'ಚೋರ್-ಚೋರ್ ಮೌಸೆರೆ ಭಾಯ್' ಎಂಬ ಗಾದೆಯಂತೆ,ಅವರ ನಡುವಿನ ಸಾಮ್ಯತೆಯನ್ನು ಸೂಚಿಸುತ್ತದೆ," ಎಂದು ಹೇಳಿದ್ದಾರೆ.
"ಅಮೆರಿಕ ಮತ್ತು ಇಸ್ರೇಲ್ ಹಿಮಾಲಯದಷ್ಟು ದೊಡ್ಡ ರಾಜಕೀಯ ಅಪನಂಬಿಕೆಯ ಬೆಟ್ಟವನ್ನು ನಿರ್ಮಿಸಿವೆ. ಮುಂದಿನ ಹಲವು ದಶಕಗಳ ಕಾಲ ಅದರ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಈ ಸಂಘರ್ಷದಲ್ಲಿ ಅಮೆರಿಕ ಮತ್ತು ಇಸ್ರೇಲ್ ವಿಜಯಶಾಲಿಯಾಗಲು ಸಾಧ್ಯವಿಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಭಾರತವು ಇಸ್ರೇಲ್ ಪರ ನಿಂತಿದೆ ಎಂಬ ಟೀಕೆಗಳ ನಡುವೆ ರಾಮ್ ದೇವ್ ಅವರ ಈ ಹೇಳಿಕೆಗಳು ಹೊರಬಂದಿವೆ.

