ಚಂಡಿಗಢ: ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಸಂಸದ ರಾಘವ್ ಚಡ್ಡಾ ನಡುವಿನ ಭಿನ್ನಾಭಿಪ್ರಾಯ ಈಗ ಬಹಿರಂಗಗೊಂಡಿದೆ. ಚಡ್ಡಾ ಅವರು ಪಕ್ಷದ ವಿಪ್ ಉಲ್ಲಂಘಿಸುವ ಮೂಲಕ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಾಗ್ದಾಳಿ ನಡೆಸಿದ್ದಾರೆ.
'ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕುರಿತು ಮಾತನಾಡಿಲ್ಲ. ಪ್ರಮುಖ ವಿಷಯಗಳ ಕುರಿತು ಧ್ವನಿ ಎತ್ತದೆ ಸಂಸತ್ತಿನಿಂದ ಹೊರನಡೆದಿದ್ದಾರೆ. ಗುಜರಾತ್ನಲ್ಲಿ ಎಎಪಿ ಕಾರ್ಯಕರ್ತರ ಬಂಧನದ ವಿರುದ್ಧ ಧ್ವನಿ ಎತ್ತುತ್ತಿಲ್ಲ. ಈ ಮೂಲಕ ಚಡ್ಡಾ ಅವರು ಪಕ್ಷದ ಸಿದ್ಧಾಂತ ಮೀರಿ ನಡೆದುಕೊಂಡಿದ್ದಾರೆ' ಎಂದು ಮಾನ್ ಕಿಡಿಕಾರಿದ್ದಾರೆ.
ರಾಜ್ಯಸಭೆಯಲ್ಲಿ ಪಕ್ಷದ ಉಪನಾಯಕರ ಸ್ಥಾನದಿಂದ ತೆಗೆದುಹಾಕಿದ ಮರುದಿನವೇ, 'ನನ್ನ ಬಾಯಿ ಮುಚ್ಚಿಸಬಹುದು, ಸೋಲಿಸಲಾಗದು' ಎಂದು ರಾಘವ್ ಚಡ್ಡಾ ಹೇಳಿದ್ದರು. ಇದಕ್ಕೆ ಮಾನ್ ಖಾರವಾಗಿಯೇ ತಿರುಗೇಟು ನೀಡಿದ್ದಾರೆ.
ಎಎಪಿ ಆರೋಪಗಳೇನು?
ಚಡ್ಡಾ ಅವರು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಿಷಯಗಳನ್ನು ಪ್ರಸ್ತಾಪಿಸುವ ಬದಲು ಮೃದು ಧೋರಣೆ ತೋರಿದ್ದಾರೆ ಎಂದು ಎಎಪಿ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿಗೆ ಹೆದರುವವರು ದೇಶಕ್ಕಾಗಿ ಹೋರಾಡಲು ಸಾಧ್ಯವೇ ಎಂದು ಎಎಪಿ ರಾಷ್ಟ್ರೀಯ ಮಾಧ್ಯಮ ಉಸ್ತುವಾರಿ ಅನುರಾಗ್ ಧಂಡಾ ಪ್ರಶ್ನಿಸಿದ್ದಾರೆ.
ಚಡ್ಡಾ ಅವರು ಕೇಂದ್ರದೊಂದಿಗೆ ರಾಜಿ ಮಾಡಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾನ್, 'ಹೌದು' ಎಂದಿದ್ದಾರೆ. ಸಂಸತ್ತಿನಲ್ಲಿ ನಾಯಕತ್ವ ಬದಲಾವಣೆ ಸಾಮಾನ್ಯ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ರಾಘವ್ ಚಡ್ಡಾ ಅವರನ್ನು ಉಪನಾಯಕ ಸ್ಥಾನದಿಂದ ಕೆಳಗಿಳಿಸಿದ ಬಗ್ಗೆ ಮಾತನಾಡಿದ ಮಾನ್, 'ನಾನು 2014ರಲ್ಲಿ ಮೊದಲ ಬಾರಿಗೆ ಗೆದ್ದಾಗ ಡಾ. ಧರಂವೀರ್ ಗಾಂಧಿ ಅವರನ್ನು ಸಂಸದೀಯ ಮಂಡಳಿಯ ನಾಯಕರನ್ನಾಗಿ ಮಾಡಲಾಗಿತ್ತು. ನಂತರ ನಾನು ಕೂಡ ಆ ಜವಾಬ್ದಾರಿ ನಿಭಾಯಿಸಿದೆ. ಪಕ್ಷ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಲೇ ಇರುತ್ತದೆ' ಎಂದಿದ್ದಾರೆ.
'ನಾವು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರಾಗಿ ಕುಳಿತಾಗ, ಸಭಾತ್ಯಾಗದಂತಹ ಅನೇಕ ನಿರ್ಧಾರಗಳನ್ನು ಒಟ್ಟಾಗಿ ತೆಗೆದುಕೊಳ್ಳುತ್ತೇವೆ. ಆದರೆ, ಯಾರಾದರೂ ಪಕ್ಷದ ಸಿದ್ಧಾಂತವನ್ನು ಮುರಿದರೆ ಅಥವಾ ವಿಪ್ ಪಾಲಿಸದಿದ್ದರೆ, ಅದು ನಿಯಮಬಾಹಿರ. ಅಂತಹವರ ವಿರುದ್ಧ ಕ್ರಮ ಅನಿವಾರ್ಯ' ಎಂದು ಮಾನ್ ಎಚ್ಚರಿಸಿದ್ದಾರೆ.
ಸಮೋಸಾ, ಪಿಜ್ಜಾ ಬಗ್ಗೆ ಮಾತನಾಡಿದರೆ ಅನುಮಾನ ಬರಲ್ವೇ?
ಚಡ್ಡಾ ಅವರ ಬಾಯಿ ಮುಚ್ಚಿಸಲಾಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಮಾನ್, 'ಗುಜರಾತ್ನಲ್ಲಿ 160 ಎಎಪಿ ಕಾರ್ಯಕರ್ತರ ಮೇಲೆ ಕೇಸ್ ದಾಖಲಾದಾಗ ಅಥವಾ ಎಂಎಸ್ಪಿ, ಜಿಎಸ್ಟಿಯಂತಹ ಗಂಭೀರ ವಿಷಯಗಳ ಬಗ್ಗೆ ಮಾತನಾಡಬೇಕಾದಾಗ, ಯಾರಾದರೂ ಸಮೋಸಾ ದರ ಅಥವಾ ಪಿಜ್ಜಾ ಡೆಲಿವರಿ ಬಗ್ಗೆ ಮಾತನಾಡಿದರೆ, ಅವರು ಬೇರೆಯವರ ಪರವಾಗಿ ಮಾತನಾಡುತ್ತಿದ್ದಾರೆ ಎಂಬ ಅನುಮಾನ ಬರುವುದಿಲ್ಲವೇ?' ಎಂದು ವ್ಯಂಗ್ಯವಾಡಿದ್ದಾರೆ.
ಗುಜರಾತ್ನಲ್ಲಿ ಎಎಪಿ ಕಾರ್ಯಕರ್ತರ ಬಂಧನದ ಬಗ್ಗೆ ಗುಜರಾತ್ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ ಮತ್ತು ಅರವಿಂದ್ ಕೇಜ್ರಿವಾಲ್ ಅವರು ಈಗಾಗಲೇ ಈ ಬಗ್ಗೆ ಪತ್ರ ಬರೆದಿದ್ದಾರೆ ಎಂದು ಮಾನ್ ತಿಳಿಸಿದ್ದಾರೆ.

