ಇಸ್ಲಾಮಾಬಾದ್: ಉಭಯ ದೇಶಗಳನ್ನು ಮತ್ತೆ ಮಾತುಕತೆಯ ಒಪ್ಪಿಸಲು ತೀವ್ರ ರಾಜತಾಂತ್ರಿಕ ಚಟುವಟಿಕೆಗಳು ನಡೆದಿವೆ ಎಂದು ಪಾಕಿಸ್ತಾನದ ಅಧಿಕೃತ ಮೂಲಗಳು ಶುಕ್ರವಾರ ತಿಳಿಸಿವೆ. ಎರಡೂ ರಾಷ್ಟ್ರಗಳು ಎರಡು ವಾರಗಳ ತಾತ್ಕಾಲಿಕ ಕದನ ವಿರಾಮವನ್ನು ಪಾಲಿಸುತ್ತಿರುವುದರಿಂದ, ಪಾಕಿಸ್ತಾನದ ಮಧ್ಯಸ್ಥಿಕೆಯ ಪ್ರಯತ್ನಗಳು ಯಶಸ್ವಿಯಾಗುವ ಮುನ್ಸೂಚನೆ ಸಿಕ್ಕಿದೆ.
ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರದಿಂದ ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದರೆ, ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಟೆಹರಾನ್ ತಲುಪಿದ್ದಾರೆ. ಷರೀಫ್ ಸೌದಿ ಮತ್ತು ಕತಾರ್ ನಾಯಕರೊಂದಿಗೆ ಚರ್ಚಿಸಿ ಗುರುವಾರ ರಾತ್ರಿ ಟರ್ಕಿಗೆ ತೆರಳಿದ್ದಾರೆ. ಇತ್ತ ಫೀಲ್ಡ್ ಮಾರ್ಷಲ್ ಮುನೀರ್ ಅವರು ಇರಾನ್ನಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ತಂಗಿದ್ದು, ಅಲ್ಲಿನ ರಾಜಕೀಯ ಮತ್ತು ಸೇನಾ ನಾಯಕರನ್ನು ಭೇಟಿ ಮಾಡಿದ್ದಾರೆ.
ಮಾತುಕತೆಯ ಫಲಿತಾಂಶದ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳದಿದ್ದರೂ, ಗುರುವಾರ ಸಂಜೆಯಿಂದ ಭದ್ರತಾ ಅಧಿಕಾರಿಗಳು ಹಠಾತ್ ಸಕ್ರಿಯರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಇಸ್ಲಾಮಾಬಾದ್ ಮತ್ತು ನೆರೆಯ ರಾವಲ್ಪಿಂಡಿಯಲ್ಲಿ ಸಿದ್ಧತೆಗಳು ಪ್ರಾರಂಭವಾಗಿವೆ. ಇತರ ಪ್ರಾಂತ್ಯಗಳಿಂದ ಸಾವಿರಾರು ಪೊಲೀಸ್ ಮತ್ತು ಅರೆಸೇನಾ ಸಿಬ್ಬಂದಿ ಆಗಮಿಸುತ್ತಿದ್ದಾರೆ' ಎಂದು ಇಸ್ಲಾಮಾಬಾದ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಸುತ್ತಿನ ಮಾತುಕತೆಯ ಸಂದರ್ಭದಲ್ಲಿ 10,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಅಂತೆಯೇ, ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ ಜಿಲ್ಲಾ ಅಧಿಕಾರಿಗಳು ಸಾರಿಗೆ ಕಂಪನಿಗಳನ್ನು ಸಂಪರ್ಕಿಸಿದ್ದು, ನಗರಕ್ಕೆ ಬರುವ ಮತ್ತು ಹೋಗುವ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶದ ಪ್ರಕಾರ, ಈ ನಿರ್ಬಂಧಗಳು ಮುಂದಿನ ವಾರದ ಅಂತ್ಯದವರೆಗೆ ಮುಂದುವರಿಯಬಹುದು. ನಾಗರಿಕರು ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ವಿಮಾನ ನಿಲ್ದಾಣದ ಸಮೀಪವಿರುವ ಮಾರುಕಟ್ಟೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವ ಸಾಧ್ಯತೆಯಿದೆ.

