ಪಚ್ದೇವ್ರಾ ಓವರ್ ಬ್ರಿಡ್ಜ್ ಸಮೀಪ ಮೊದಲಿಗೆ ಕಲ್ಕಾ ಎಕ್ಸ್ ಪ್ರೆಸ್ ರೈಲು ಹಳಿಯಲ್ಲಿ ಇದ್ದ ವ್ಯಕ್ತಿಗೆ ಢಿಕ್ಕಿ ಹೊಡೆದು ಆತ ಮೃತಪಟ್ಟಿದ್ದಾನೆ. ಈ ಕಾರಣದಿಂದ ರೈಲು ನಿಲ್ಲಿಸಲಾಗಿದೆ.
ಈ ವೇಳೆ ಕೆಲವು ಪ್ರಯಾಣಿಕರು ರೈಲಿನಿಂದ ಇಳಿದು ಹಳಿಯ ಮೇಲೆ ತೆರಳಿ ಅಪಘಾತವನ್ನು ನೋಡುತ್ತಿದ್ದರು. ಆಗ ಪಕ್ಕದ ಹಳಿಯಲ್ಲಿ ವೇಗವಾಗಿ ಬಂದ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲು, ಹಳಿಯಲ್ಲಿದ್ದ ನಾಲ್ವರ ಮೇಲೆ ಹರಿದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದರಿಂದ ಘಟನೆಯಲ್ಲಿ ಒಟ್ಟು ಐವರು ಮೃತಪಟ್ಟಿದ್ದಾರೆ.
ಉತ್ತರ ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಶಿಕಾಂತ್ ತ್ರಿಪಾಠಿ ಅವರು, ಪ್ರಯಾಣಿಕರು ಸುರಕ್ಷತಾ ನಿಯಮಗಳನ್ನು ಪಾಲಿಸದೇ ಹಳಿಗೆ ಇಳಿದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಘಟನೆಯ ಪರಿಣಾಮವಾಗಿ ಹೌರಾ-ದಿಲ್ಲಿ ಮಾರ್ಗದಲ್ಲಿ ಕೆಲಕಾಲ ರೈಲು ಸಂಚಾರ ವ್ಯತ್ಯಯ ಉಂಟಾಯಿತು. ನಂತರ ಸಂಚಾರ ಪುನಃ ಆರಂಭಗೊಂಡಿದೆ.

